ರಾಯಚೂರು:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಿ, ಸಮಾನ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಫೆಬ್ರುವರಿ 11ರಂದು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿಯಿಂದ ನಗರದ ಪ್ರಾದೇಶಿಕ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುದ್ದುಕೃಷ್ಣ ತಿಳಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ನೌಕರರು ಸರ್ಕಾರದ ಖಜಾನೆ ತುಂಬುವ ಕೆಲಸ ಮಾಡುತ್ತೇವೆ. ಹಬ್ಬ ಹರಿದಿನ ಆಚರಿಸದೆ ವರ್ಷಪೂರ್ತಿ ಊರೂರು ಅಲೆದಾಡಿ ದುಡಿಯುತ್ತಿದ್ದೇವೆ. ಆದರೆ ಸಾರಿಗೆ ನಿಗಮಗಳ ನೌಕರರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ ಎಂದುಆರೋಪಿಸಿದರು.
ಕಳೆದ ನವೆಂಬರ್ 6 ರಂದು ಮಹಾಮಂಡಳಿಯಿಂದ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಡಳಿತ ಮಂಡಳಿ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಜನವರಿ 1ರಿಂದಲೇ ಸರ್ಕಾರಿ ನೌಕರರ ವೇತನ ಶ್ರೇಣಿಗಳು ನಮಗೂ ಅನ್ವಯಿಸಿ ಜಾರಿಗೆ ತರಬೇಕು ಎಂದು ಒತ್ತಾಯಿಸಲಾಗಿತ್ತು. ಆದರೆ ಈವರೆಗೆ ಜಾರಿಮಾಡದೇ ವಿಳಂಬ ಮಾಡುತ್ತಾ ಬಂದಿರುವುದು ಸರಿಯಲ್ಲ ಎಂದು ದೂರಿದರು.
ಸರ್ಕಾರಿ ನೌಕರರಿಗಿಂತ ಸಾರಿಗೆ ಸಂಸ್ಥೆಯ ನೌಕರರಿಗೆ ವೇತನ ಕಡಿಮೆ ಸುಮಾರು 25 ವರ್ಷಗಳಿಂದಲೂ ತಾರತಮ್ಯ ಮಾಡುತ್ತಿದ್ದು, ಕೂಡಲೇ 40ರಷ್ಟು ವೇತನ ಪರಿಷ್ಕರಣೆ ಮಾಡಬೇಕೆಂದು ಧರಣಿ ನಡೆಸಲಾಗುತ್ತಿದೆ ಎಂದರು.
ರಸ್ತೆ ಸಾರಿಗೆ ನಿಗಮ ನೌಕರರ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡಲು ಹಾಗೂ ವೇತನ ಪರಿಷ್ಕರಣೆಗೆ ಒತ್ತಾಯಿಸಿ ರಾಜ್ಯ ಮಂಡಳಿ ಹೋರಾಟಕ್ಕೆ ಕರೆ ನೀಡಿದೆ. ಅದರ ಆದೇಶದಂತೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಮಂಡಳಿಯ ಮುಖಂಡರಾದ ಶಾಂತಮೂರ್ತಿ, ಸುರೇಶ ಪಾಟೀಲ, ಬಂದು ಪಾಟೀಲ, ಜಂಬಣ್ಣ, ಮರಿಯಪ್ಪ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.