ADVERTISEMENT

ಕೋವಿಡ್‌–19 ಮುನ್ನಚ್ಚರಿಕೆಗೆ ಸ್ತಬ್ಧವಾಗಿರುವ ಜಿಲ್ಲೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 16:31 IST
Last Updated 26 ಮಾರ್ಚ್ 2020, 16:31 IST
ರಾಯಚೂರಿನ ಬಸವೇಶ್ವರ ವೃತ್ತದಲ್ಲಿ ಗುರುವಾರ ಕಂಡುಬಂದ ನೋಟ
ರಾಯಚೂರಿನ ಬಸವೇಶ್ವರ ವೃತ್ತದಲ್ಲಿ ಗುರುವಾರ ಕಂಡುಬಂದ ನೋಟ   

ರಾಯಚೂರು: ಕೊರೊನಾ ಸೋಂಕು ಹರಡುವುದನ್ನು ತಡೆತಟ್ಟಲು ಮುನ್ನಚ್ಚರಿಕೆ ಕ್ರಮಗಳನ್ನು ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದ್ದು, ಅನಗತ್ಯ ಸಂಚರಿಸುವವರನ್ನು ಬಹುತೇಕ ನಿಯಂತ್ರಿಸಲಾಗಿದೆ. ಅಗತ್ಯ ಸರಕು ತರುವ ನೆಪದಲ್ಲಿ ಕೆಲವರು ಹೊರಬರುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದ್ದು, ಮನೆಮನೆಗೂ ಅಗತ್ಯ ವಸ್ತುಗಳ ಸಂತೆ ತಲುಪಿಸುವ ಯೋಜನೆ ಜಾರಿ ಮಾಡುತ್ತಿದೆ.

ರಾಯಚೂರು ನಗರದಲ್ಲಿ ವಾರ್ಡ್‌ವಾರು ಕಿರಾಣಿ ಸಾಮಗ್ರಿ, ಹಾಲಿನ ಉತ್ಪನ್ನಗಳು, ಸ್ಟೇಷನರಿ ಹಾಗೂ ರೊಟ್ಟಿ ಕೇಂದ್ರಗಳನ್ನು ಗುರುತಿಸಲಾಗಿದ್ದು, ಜನರು ಸಂಪರ್ಕಿಸಲು ಸಾಧ್ಯವಾಗುವಂತೆ ಕರಪತ್ರಗಳನ್ನು ಮುದ್ರಿಸಲಾಗಿದೆ. ಪೌರಕಾರ್ಮಿಕರು ಕರಪತ್ರಗಳನ್ನು ಮನೆಮನೆಗೆ ತಲುಪಿಸಲಿದ್ದಾರೆ. ಅದೇ ರೀತಿ ಸಿಂಧನೂರು ಮತ್ತು ಮಾನ್ವಿಯಲ್ಲೂ ಮನೆಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ಲಿಂಗಸುಗೂರು, ದೇವದುರ್ಗ, ಮಸ್ಕಿಗಳಲ್ಲಿ ಬೆಳಿಗ್ಗೆ 7 ರಿಂದ 11 ರವರೆಗೂ ಸಂತೆ ಮಾಡುವುದಕ್ಕೆ ಸಾರ್ವಜನಿಕರಿಗೆ ಸಮಯ ನಿಗದಿ ಮಾಡಲಾಗಿದೆ. ಪ್ರತಿಯೊಂದು ಅಂಗಡಿಗಳ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಜನದಟ್ಟಣನೆ ಅತಿಯಾಗಿ ನೆರೆಯದ ಕೇಂದ್ರಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ.

ADVERTISEMENT

ಪೊಲೀಸರು ಕಾವಲು

ಪೊಲೀಸರು ವಿಚಾರಿಸದೆ ಲಾಠಿ ಬೀಸುತ್ತಿದ್ದಾರೆ ಎಂದು ದೂರುಗಳು ಕೇಳಿ ಬರುತ್ತಿದ್ದು, ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸರು ಈ ಬಗ್ಗೆ ಚರ್ಚಿಸಿ ಪಾಸ್‌ ನೀಡುವುದಕ್ಕೆ ಮುಂದಾಗಿದ್ದಾರೆ.

ವಾಟರ್ ಮ್ಯಾನ್ ಗಳು, ಸ್ಥಳೀಯ ಸಂಸ್ಥೆಗಳ ಕೆಲಸಗಾರರು, ಪೆಟ್ರೋಲ್ ಬಂಕ್ ಕೆಲಸ ಮಾಡುವವರು, ಎಲ್‌ಪಿಜಿ ಸರಬರಾಜು ಮಾಡುವವರು, ಪೋಸ್ಟ್ ಆಫೀಸ್ ಕೆಲಸಗಾರರು, ಹಣ್ಣು, ತರಕಾರಿ, ಕಿರಾಣಿ ಅಂಗಡಿ ಕೆಲಸಗಾರರು, ಹಾಲಿನ ವ್ಯಾಪಾರಿಗಳು, ಖಾಸಗಿ ಸೆಕ್ಯುರಿಟಿ ಗಾರ್ಡ್ಸ್‌, ಬ್ಯಾಂಕ್ ಕೆಲಸಗಾರರು, ಮೆಡಿಕಲ್ ಲ್ಯಾಬ್ ಮತ್ತು ಕೇಬಲ್ ಕೆಲಸಗಾರರು, ಎಪಿಎಂಸಿ ಕೆಲಸಗಾರರು, ಮೊಬೈಲ್‌ ನೆಟ್‌ವರ್ಕ್‌ ಸೇರಿದಂತೆ ಎಲ್ಲಾ ರೀತಿಯ ಜೀವನಾವಶ್ಯಕ ವಸ್ತುಗಳ ಸಾಗಣೆಗಾಗಿ ಮತ್ತು ಸೇವೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ಪತ್ರಿಕೆ ಹಂಚುವವರಿಗೆ ಪಾಸ್‌

ಸುದ್ದಿ ಪತ್ರಿಕೆಗಳನ್ನು ಮಾರಾಟ ಮಾಡುವುದಕ್ಕೆ, ಪತ್ರಿಕೆ ಸಾಗಿಸುವ ವಾಹನಗಳಿಗೆ ಹಾಗೂ ಮನೆಮನೆಗೂ ಪತ್ರಿಕೆ ಹಂಚುವುದಕ್ಕೆ ಜಿಲ್ಲಾಡಳಿತರಿಂದ ಪಾಸ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ತಿಳಿಸಿದ್ದಾರೆ.

ಪತ್ರಿಕಾಲಯಗಳಲ್ಲಿ ಕೆಲಸ ಮಾಡುವವರು, ಪತ್ರಿಕೆ ಹಂಚುವವರು ಹಾಗೂ ನಾಲ್ಕು ಚಕ್ರದ ವಾಹನಗಳ ಮಾಹಿತಿ ಸಂಗ್ರಹಿಸಿ ತರುವಂತೆ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.