ADVERTISEMENT

ದಿನಸಿ ಖರೀದಿಗೆ ಮುಗಿಬಿದ್ದ ಜನ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 13:19 IST
Last Updated 30 ಏಪ್ರಿಲ್ 2021, 13:19 IST
ಕವಿತಾಳದಲ್ಲಿ ಶುಕ್ರವಾರ 10 ಗಂಟೆ ನಂತರವೂ ತೆರೆದಿದ್ದ ಚಿನ್ನದ ಅಂಗಡಿಗೆ ಬಂದ್‍ ಪಿಎಸ್‌ಐ ಎಂ.ವೆಂಕಟೇಶ, ಅಂಗಡಿ ಮುಚ್ಚುವಂತೆ ಮಾಲೀಕರಿಗೆ ಸೂಚಿಸಿದರು
ಕವಿತಾಳದಲ್ಲಿ ಶುಕ್ರವಾರ 10 ಗಂಟೆ ನಂತರವೂ ತೆರೆದಿದ್ದ ಚಿನ್ನದ ಅಂಗಡಿಗೆ ಬಂದ್‍ ಪಿಎಸ್‌ಐ ಎಂ.ವೆಂಕಟೇಶ, ಅಂಗಡಿ ಮುಚ್ಚುವಂತೆ ಮಾಲೀಕರಿಗೆ ಸೂಚಿಸಿದರು   

ಕವಿತಾಳ:ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿರುವುದು ಪಟ್ಟಣದಲ್ಲಿ ಶುಕ್ರವಾರ ಕಂಡುಬಂತು.

ಬೆಳಿಗ್ಗೆ 6 ಗಂಟೆಗೆ ಅಂಗಡಿಗಳು ಆರಂಭವಾಗುತ್ತಲೇ ಜನರ ಓಡಾಟ ಹೆಚ್ಚುತ್ತಿದೆ. ಬಹುತೇಕ ಕಿರಾಣಿ ಅಂಗಡಿಗಳ ಮುಂದೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ನಿಲ್ಲುವುದು ಸಾಮಾನ್ಯವಾಗಿದೆ.

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರು ಅಗತ್ಯ ವಸ್ತುಗಳ ಖರೀದಿಗೆ ಪಟ್ಟಣಕ್ಕೆ ಬರುತ್ತಾರೆ. 10 ಗಂಟೆಗೆ ಅಂಗಡಿಗಳು ಮುಚ್ಚುವುದರಿಂದ ಅಗತ್ಯ ವಸ್ತುಗಳ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಅಡುಗೆ ಎಣ್ಣೆ ಸೇರಿದಂತೆ ಕೆಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ ಜನ ಖರೀದಿಸುತ್ತಿದ್ದಾರೆ.

ADVERTISEMENT

‘ಕಳೆದ ವರ್ಷ ಒಂದು ಲೀಟರ್‌ಗೆ ₹98 ಇದ್ದ ಸೂರ್ಯಕಾಂತಿ ರಿಫೈನ್ಡ್‍ ಅಡುಗೆ ಎಣ್ಣೆ ಇದೀಗ ₹170ಕ್ಕೆ ಏರಿಕೆಯಾಗಿದೆ. ಜೀವನ ನಡೆಸುವುದು ದುಸ್ತರವಾಗಿದೆ’ ಎಂದು ಪಾರ್ವತಮ್ಮ ಹೇಳಿದರು.

ಮದುವೆ ಮತ್ತಿತರ ಶುಭ ಕಾರ್ಯಗಳಿಗೆ ಚಿನ್ನ ಖರೀದಿಯೂ ಜೋರಾಗಿ ನಡೆಯುತ್ತಿದೆ. ಇಲ್ಲಿನ ಕೆಲವು ಚಿನ್ನದ ಅಂಗಡಿಗಳಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಯಲ್ಲಿ ಚಿನ್ನ ಖರೀದಿಯಲ್ಲಿ ತೊಡಗಿದ್ದು ಕಂಡುಬಂತು.

ಬೆಳಿಗ್ಗೆ 10 ಗಂಟೆಯ ನಂತರವೂ ವ್ಯವಹಾರ ನಡೆಸುತ್ತಿದ್ದಅಂಗಡಿಗಳನ್ನು ಪೊಲೀಸರು ಬಂದ್‍ ಮಾಡಿಸಿದರು.

ಮುಖ್ಯರಸ್ತೆಯಲ್ಲಿನ ಚಿನ್ನದ ಅಂಗಡಿಗೆ ಆಗಮಿಸಿದ ಸಬ್‍ ಇನ್‌ಸ್ಪೆಕ್ಟರ್‌ ಎಂ.ವೆಂಕಟೇಶ ಗ್ರಾಹಕರನ್ನು ಹೊರಗೆ ಕಳುಹಿಸಿ ಅಂಗಡಿ ಮುಚ್ಚುವಂತೆ ಸೂಚಿಸಿದರು.

ಪೊಲೀಸರು ಬಂದಾಗ ಅಂಗಡಿಗಳನ್ನು ಮುಚ್ಚುವುದು ಅವರು ತೆರಳಿದ ನಂತರ ಮತ್ತೆ ತೆರೆಯುವುದು ನಡೆಯುತ್ತಿದೆ. ಲಾಕ್‌ಡೌನ್‌ ಅವಧಿ ನಂತರ ವ್ಯವಹರಿಸುತ್ತಿದ್ದ ಕೆಲ ಅಂಗಡಿ ಮಾಲೀಕರಿಗೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ದಂಡದ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.