ADVERTISEMENT

ಆರು ಕಳ್ಳರ ಬಂಧನ: ₹5.62 ಲಕ್ಷ ಮೌಲ್ಯದ ಆಭರಣ ಜಪ್ತಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 19:51 IST
Last Updated 17 ಜುಲೈ 2019, 19:51 IST
ರಾಯಚೂರಿನ ಪೊಲೀಸರ ತಂಡವು ಕಾರ್ಯಾಚರಣೆ ನಡೆಸಿ ಮನೆಗಳ್ಳತನ ಮಾಡುತ್ತಿದ್ದ ಆರು ಮಂದಿ ಕಳ್ಳರನ್ನು ಬಂಧಿಸಿ, ಅವರಿಂದ ಆಭರಣಗಳು ಮತ್ತು ವಾಹನವನ್ನು ಜಪ್ತಿ ಮಾಡಿಕೊಂಡಿದೆ
ರಾಯಚೂರಿನ ಪೊಲೀಸರ ತಂಡವು ಕಾರ್ಯಾಚರಣೆ ನಡೆಸಿ ಮನೆಗಳ್ಳತನ ಮಾಡುತ್ತಿದ್ದ ಆರು ಮಂದಿ ಕಳ್ಳರನ್ನು ಬಂಧಿಸಿ, ಅವರಿಂದ ಆಭರಣಗಳು ಮತ್ತು ವಾಹನವನ್ನು ಜಪ್ತಿ ಮಾಡಿಕೊಂಡಿದೆ   

ರಾಯಚೂರು: ತಾಲ್ಲೂಕಿನ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ವಿವಿಧೆಡೆ ಮನೆಗಳ್ಳತನ ಮಾಡುತ್ತಿದ್ದ ಕಲಬುರ್ಗಿಯ ಆರು ಮಂದಿ ಕಳ್ಳರ ಗುಂಪನ್ನು ಪೊಲೀಸರ ತಂಡವು ಮಂಗಳವಾರ ರಾತ್ರಿ ಬಂಧಿಸಿದೆ.

ಕಲಬುರ್ಗಿಯ ಸುಲ್ತಾನಪುರ ಗ್ರಾಮದ ನಿವಾಸಿ, ಭಗಳಾ ಪೆಟ್ರೊಲ್‌ ಬಂಕ್‌ ಬಳಿ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುವ ಮಲ್ಲು ಗಣಪತಿ, ಕಲಬುರ್ಗಿ ಶಹಾಬಜಾರ್‌ ಬಳಿಯ ಕಬಾಡಿ ಗಲ್ಲಿ ನಿವಾಸಿ ಕೂಲಿ ಕೆಲಸ ಮಾಡುವ ರವಿ ಪ್ರಭು ಲಮಾಣಿ, ಕಲಬುರ್ಗಿಯ ಫಿಲ್ಟರ್‌ಬೆಡ್‌ ರಾಜೀವ್‌ಗಾಂಧಿ ನಗರ ನಿವಾಸಿ ಯಲ್ಲಾಲಿಂಗ ಹನುಮಂತ ಕಬ್ಬೇರ್‌, ಕಲಬುರ್ಗಿ ಶಹಾಬಜಾರ್‌ ನಿವಾಸಿ ಕ್ರೂಸರ್‌ ಚಾಲಕ ಹನುಮಂತ ಯಂಕಪ್ಪ ವಡ್ಡರ್‌, ಕಲಬುರ್ಗಿಯ ಆಳಂದ ಚೆಕ್‌ಪೋಸ್ಟ್‌ ನಿವಾಸಿ ಹೋಮ್‌ಗಾರ್ಡ್‌ ಕೆಲಸ ಮಾಡುವ ಶಾಮ್‌ಸಿಂಗ್‌ ಖೇಮಸಿಂಗ್‌ ಪೋಚರ್‌, ಕಲಬುರ್ಗಿಯ ದರ್ಗಾ ಏರಿಯಾ ನಿವಾಸಿ ಮೊಡಕಾ ಸಾಮಾನು ವ್ಯಾಪಾರಿ ಗಿಡ್ಡ್ಯಾ ಉರ್ಫ್‌ ಸರ್ಫುದ್ದೀನ್‌ ಸುಲ್ತಾನಪುರ ಪೊಲೀಸರಿಗೆ ಸಿಕ್ಕಿಬಿದ್ದಿರುವ ಕಳ್ಳರು. ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಒಟ್ಟು ಐದು ಕಡೆಗಳಲ್ಲಿ ಕಳ್ಳತನ ಮಾಡಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಆರೋಪಿಗಳಿಂದ 196 ಗ್ರಾಂ ಚಿನ್ನಾಭರಣಗಳು ಹಾಗೂ 500 ಗ್ರಾಂ ಬೆಳ್ಳಿ ಸೇರಿ ಒಟ್ಟು ₹5,62,550 ಮೌಲ್ಯದ ಆಭರಣಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಇದಲ್ಲದೆ, ಕಳ್ಳತನಕ್ಕೆ ಉಪಯೋಗಿಸುತ್ತಿದ್ದ ಒಂದು ಕ್ರೂಸರ್‌ ಜೀಪ್‌ ಮತ್ತು ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿಬಾಬು, ಡಿವೈಎಸ್‌ಪಿ ಎಸ್‌.ಎಚ್‌. ಶೀಲವಂತ ಅವರ ಸುಪರ್ದಿಯಲ್ಲಿ ಗ್ರಾಮೀಣ ವೃತ್ತದ ಸಿಪಿಐ ಅಂಬಾರಾಯ ಎಂ. ಕಮಾನಮನಿ, ಪಿಎಸ್‌ಐಗಳಾದ ಸಾಬಯ್ಯ, ಜಗದೀಶ ಹಾಗೂ ನುರಿತ ಸಿಬ್ಬಂದಿಯನ್ನೊಳಗೊಂಡ ತಂಡವನ್ನು ಕಳ್ಳತನ ಪ್ರಕರಣಗಳನ್ನು ಬೇಧಿಸುವುದಕ್ಕಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ ಅವರು ನೇಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.