ರಾಯಚೂರು: ಡ್ಯಾಡಿ ಕಾಲೊನಿಯಲ್ಲಿನ ದ್ವಿ–ಪಥ ರಸ್ತೆ ಕಾಮಗಾರಿ ಫೆಬ್ರುವರಿ ತಿಂಗಳಲ್ಲೇ ಮುಗಿಯಬೇಕಿತ್ತು. ಜೆಸ್ಕಾಂ ಅಧಿಕಾರಿಗಳು 900 ಮೀಟರ್ ರಸ್ತೆ ಬದಿಯ ಹಳೆಯ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಹಾಗೂ ಹೊಸ್ ಲೈನ್ ಎಳೆಯಲು ಮೂರು ತಿಂಗಳಿಂದ ಕಾಮಗಾರಿ ನಡೆಸಿದ್ದಾರೆ. ಈವರೆಗೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಇದರಿಂದಾಗಿ ರಸ್ತೆ ಕಾಮಗಾರಿಯೂ ಪೂರ್ಣಗೊಳ್ಳುತ್ತಿಲ್ಲ.
ಮಹಾನಗರ ಪಾಲಿಕೆಯ ಶೇ 25ರಷ್ಟು ಪ್ರದೇಶದ ಜನ ಡ್ಯಾಡಿ ಕಾಲೊನಿಯ ಕಾಮಗಾರಿಯಲ್ಲಿನ ವಿಳಂಬದಿಂದಾಗಿ ಒಂದೂವರೆ ತಿಂಗಳಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಡ್ಯಾಡಿ ಕಾಲೊನಿ, ಸರ್ಕಾರಿ ಪದವಿ ಕಾಲೇಜು, ಪಿ.ಸಿ.ಬಿ ಕಾಲೊನಿ, ಡುಂಬಾ ಕಾಲೊನಿ, ಸಿಟಿ ಕ್ಲಬ್, ಅಲ್ಲಿ ನಾಯಕ ಕಾಲೊನಿ, ಗುರು ಬಸವ ಕಾಲೊನಿ, ಕಾಕತೀಯ ಕಾಲೊನಿ, ಶಾಂತಿ ಕಾಲೊನಿ, ಡಾಲರ್ಸ್ ಕಾಲೊನಿ ನಿವಾಸಿಗಳು ವಿದ್ಯುತ್ ಕಡಿತದಿಂದ ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ.
ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ವಾಣಿಜ್ಯ ಸಂಸ್ಥೆಗಳ ಕಾರ್ಯನಿರ್ವಹಣೆಗೂ ಬಹಳಷ್ಟು ತೊಡಕಾಗಿದೆ. ಕಳೆದ ವಾರ ಮೂರು ದಿನವಿಡೀ ವಿದ್ಯುತ್ ಸಂಪರ್ಕ ಇರಲಿಲ್ಲ. ಈಗ ಮತ್ತೆ ಎರಡು ದಿನ ದಿನವಿಡೀ ವಿದ್ಯುತ್ ಇರುವುದಿಲ್ಲ. ಇದರ ಮಧ್ಯೆ ನಿತ್ಯ ಎರಡು ತಾಸು ವಿದ್ಯುತ್ ಕಡಿತಗೊಳಿಸುವುದು ಸಾಮಾನ್ಯ. ಜೆಸ್ಕಾಂ ಕಾರ್ಯವೈಖರಿಗೆ ಜನ ರೋಸಿ ಹೋಗಿದ್ದಾರೆ ಎಂದು ಡ್ಯಾಡಿ ಕಾಲೊನಿಯ ನಿವಾಸಿಗಳಾದ ಬಸವರಾಜ ಹಾಗೂ ತೇಜಕುಮಾರ ಬೇಸರದಿಂದ ಹೇಳುತ್ತಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅವರೇ ಅಪರೂಪಕ್ಕೆ ರಾಯಚೂರಿಗೆ ಬಂದು ಹೋಗುತ್ತಾರೆ. ಅಧಿಕಾರಿಗಳ ಮೇಲೆ ನಿಯಂತ್ರಣವೇ ಇಲ್ಲವಾಗಿದೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಂಥ ಹಿರಿಯ ಅಧಿಕಾರಿಗಳೂ ಜಿಲ್ಲೆಗೆ ಕಾಟಾಚಾರಕ್ಕೆ ಬಂದು ಹೋಗುತ್ತಾರೆ. ಜನರ ಗೋಳು ಕೇಳುವವರೇ ಇಲ್ಲವಾಗಿದ್ದಾರೆ ಎಂದು ಸಾರ್ವಜನಿಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸಹಾಯವಾಣಿ ಕೇಂದ್ರದ ಅಸಹಾಯಕತೆ
ನಗರದಲ್ಲಿ ವಿದ್ಯುತ್ ಕಡಿತಗೊಳಿಸುತ್ತಿರುವ ಬಗ್ಗೆ ಜೆಸ್ಕಾಂ ಅಧಿಕಾರಿಗಳು ಸಹಾಯವಾಣಿ ಕೇಂದ್ರದ ಸಿಬ್ಬಂದಿಗೆ ಮಾಹಿತಿಯನ್ನೇ ಕೊಡುವುದಿಲ್ಲ. ಪತ್ರಿಕೆಗಳಲ್ಲಿ ಪ್ರಕಟವಾದ ನಂತರವೇ ಅವರಿಗೂ ಗೊತ್ತಾಗುತ್ತದೆ. ಜೆಸ್ಕಾಂ ಸಿಬ್ಬಂದಿ ಕಾರ್ಯವೈಖರಿ ಸಹಾಯವಾಣಿ ಕೇಂದ್ರಕ್ಕೂ ಕಿರಿಕಿರಿಯಾಗಿದೆ. ಸಹಾಯವಾಣಿಗೆ ಕೇವಲ ಎರಡು ನಂಬರ್ಗಳು ಇವೆ. ದಿನವಿಡೀ ಮಿಸ್ಕಾಲ್ ಸೇರಿ ಸರಾಸರಿ ಒಂದು ಲಕ್ಷ ಕರೆಗಳು ಬರುತ್ತವೆ. ಎಲ್ಲ ಕರೆಗಳನ್ನು ಸ್ವೀಕರಿಸುವುದು ಕಷ್ಟವಾಗುತ್ತದೆ. ಒಂದು ಕರೆಗೆ ಫೋನ್ನಲ್ಲಿ ಉತ್ತರಿಸುವಾಗ ಅನೇಕ ಫೋನ್ಗಳು ಬರುತ್ತವೆ. ಹೀಗಾಗಿ ಬಹುತೇಕರಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ ಎಂದು ಸಹಾಯವಾಣಿ ಕೇಂದ್ರದ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದರು.
ಜೆಸ್ಕಾಂ ಅಧಿಕಾರಿಗಳ ಸಭೆ
ಜೆಸ್ಕಾಂ ನಿರಂತರ ವಿದ್ಯುತ್ ಕಡಿತಗೊಳಿಸುತ್ತಿರುವ ಕಾರಣ ಕುಡಿಯುವ ನೀರು ಸರಬರಾಜಿನಲ್ಲೂ ಸಮಸ್ಯೆಯಾಗುತ್ತಿದೆ. ಮಾನವ ಸಂಪನ್ಮೂಲ ಹೆಚ್ಚಿಸಿಕೊಂಡು ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಜೆಸ್ಕಾಂ ಅಧಿಕಾರಿಗಳ ಮೂರು ಸಭೆಗಳನ್ನು ಕರೆದು ಸೂಚನೆ ನೀಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ತಿಳಿಸಿದರು. ‘₹2 ಕೋಟಿ ವೆಚ್ಚದಲ್ಲಿ 900 ಮೀಟರ್ ಉದ್ದದ ದ್ವಿ–ಪಥ ರಸ್ತೆ ನಿರ್ಮಿಸಲಾಗುತ್ತಿದೆ. ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವಂತೆ ಗುತ್ತಿಗೆದಾರರಿಗೂ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.
ಮತ್ತೆ ಎರಡು ದಿನ ವಿದ್ಯುತ್ ಇಲ್ಲ
ರಾಯಚೂರು: ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗ-1 ಹಾಗೂ 2ರ ವ್ಯಾಪ್ತಿಗೆ ಬರುವ ಡ್ಯಾಡಿ ಕಾಲೊನಿಯ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳುತ್ತಿರುವ ಪ್ರಯುಕ್ತ ಜುಲೈ 5 ಹಾಗೂ 6ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಡ್ಯಾಡಿ ಕಾಲೊನಿ ಸರ್ಕಾರಿ ಪದವಿ ಕಾಲೇಜು ಪಿ.ಸಿ.ಬಿ ಕಾಲೊನಿ ಡುಂಬಾ ಕಾಲೊನಿ ಸಿಟಿ ಕ್ಲಬ್ ಅಲ್ಲಿ ನಾಯಕ ಕಾಲೊನಿ ಗುರು ಬಸವ ಕಾಲೊನಿ ಕಾಕತೀಯ ಕಾಲೊನಿ ಶಾಂತಿ ಕಾಲೊನಿ ಡಾಲರ್ಸ್ ಕಾಲೊನಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08532-226386 08532-231999 ಸಂಪರ್ಕಿಸಬೇಕು ಎಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗ-1 ಹಾಗೂ 2ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ವಿದ್ಯುತ್ ಸಮಸ್ಯೆಯಿಂದಾಗಿ ನಗರದ ಜನತೆ ಮಹಾನಗರ ಪಾಲಿಕೆ ಕಚೇರಿಗೆ ಫೋನ್ ಮಾಡಲು ಶುರು ಮಾಡಿದ್ದು ಜೆಸ್ಕಾಂ ಅಧಿಕಾರಿಗಳೊಂದಿಗೆ ಮತ್ತೆ ಸಭೆ ನಡೆಸಲಾಗುವುದು-ಜುಬಿನ್ ಮೊಹಾಪಾತ್ರ, ಮಹಾನಗರ ಪಾಲಿಕೆ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.