ರಾಯಚೂರು:‘ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ತಯಾರಿ ಮಾಡಿಕೊಳ್ಳುವವರಿಗೆ ‘ಪ್ರಜಾವಾಣಿ’ ದಿನಪತ್ರಿಕೆಯು ಬೈಬಲ್ ಇದ್ದಂತೆ. ಮುಖಪುಟದ ಸುದ್ದಿಗಳು, ಸಂಪಾದಕೀಯ, ದೇಶ–ವಿದೇಶ ಸುದ್ದಿಗಳನ್ನು, ಕ್ರೀಡಾಸುದ್ದಿಗಳನ್ನು ತಪ್ಪದೇ ಓದಿ, ಮುಖ್ಯಾಂಶಗಳನ್ನು ಬರೆದಿಟ್ಟುಕೊಳ್ಳಬೇಕು. ಮುಖ್ಯಾಂಶಗಳು ಮನನ ಮಾಡುವುದಕ್ಕೆ ಅನುಕೂಲ. ಕಂಪ್ಯೂಟರ್ ಮೆಮೊರಿ ರೀತಿ ಮೆದುಳಿನಲ್ಲಿ ವಿಷಯ ಸಂಗ್ರಹ ಆಗುವುದಿಲ್ಲ. ಮನನ, ಪುನರ್ಮನನ ಆದಾಗಲೇ ವಿಷಯಾಸಕ್ತಿ ಬೆಳೆದು ನೆನಪಿನಲ್ಲಿ ಉಳಿದುಕೊಳ್ಳುತ್ತದೆ’ ಎಂದು ಉಪವಿಭಾಗಾಧಿಕಾರಿ ಸಂತೋಷಕುಮಾರ್ ಎಸ್.ಕೆ. ವಿವರಿಸಿದರು.
‘ಅಧ್ಯಯನ ಹೆಚ್ಚಾದಂತೆ, ಸರ್ಕಾರಿ ಅಧಿಕಾರಿ ಹೇಗಿರಬೇಕು ಎಂಬುದರ ಸ್ವರೂಪವು ವ್ಯಕ್ತಿತ್ವದೊಳಗೆ ರೂಪಗೊಳ್ಳುತ್ತಾ ಹೋಗುತ್ತದೆ. ಪ್ರತಿಯೊಂದು ವಿಷಯವನ್ನು ವಿಶ್ಲೇಷಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಐಎಎಸ್, ಕೆಎಎಸ್ ಪರೀಕ್ಷೆ ಪಾಸು ಮಾಡುತ್ತೇನೆ ಎನ್ನುವ ದೃಢ ಸಂಕಲ್ಪದಿಂದ ಬದ್ಧತೆಯಿಂದ ಪ್ರಯತ್ನ ಪಟ್ಟರೆ, ಸುತ್ತಲಿನ ಪ್ರಪಂಚವು ಅದಕ್ಕೆ ಪೂರಕವಾಗಿ ಸ್ಪಂದಿಸುತ್ತದೆ. ಬಂಧುಗಳು, ಗೆಳೆಯರು, ಪಾಲಕರು ಎಲ್ಲರೂ ಸಹಕಾರ ನೀಡುತ್ತಾರೆ. ‘ಜ್ಞಾನ ಮತ್ತು ಯಶಸ್ಸು ಯಾವ ಶ್ರೀಮಂತರ ಸ್ವತ್ತು ಅಲ್ಲ, ಶ್ರಮಜೀವಿಗಳ ಸ್ವತ್ತು’ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದು ತಿಳಿಸಿದರು.
‘ಅಧ್ಯಯನ ಆರಂಭಿಸಿದ ಬಳಿಕ, ಏನು ಮಾಡಬೇಕು? ಏನೇನು ಮಾಡಬಾರದು? ಎಂಬುದರ ಪರಿಕಲ್ಪನೆ ಇರಬೇಕು. ಏನು ಓದಬೇಕು? ಏನನ್ನು ಓದಬಾರದು? ಎನ್ನುವ ಮಾಹಿತಿಯನ್ನು ಪಟ್ಟಿ ಮಾಡಿಕೊಳ್ಳಬೇಕು. ದಿನಪತ್ರಿಕೆ ಓದುವುದರಿಂದ ಹೊಸ ಹೊಸ ವಿಷಯಗಳ ’ಲಿಂಕ್’ ಸಿಗುತ್ತದೆ. ಮಹತ್ವದ್ದು ಎನಿಸುವ ಹೊಸ ಪದ, ಸ್ಥಳ ಅಥವಾ ಘಟನೆಯ ಬಗ್ಗೆ ಗೊತ್ತಾದ ಕೂಡಲೇ ಅದರ ಸಂಪೂರ್ಣ ಮಾಹಿತಿ ಹುಡುಕಿಕೊಳ್ಳಬೇಕು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.