ADVERTISEMENT

ಬಸನಗೌಡ ಗೆದ್ದ ತಕ್ಷಣ ಗೂಂಡಾಗಿರಿ: ಪ್ರತಾಪಗೌಡ

​ಪ್ರಜಾವಾಣಿ ವಾರ್ತೆ
Published 3 ಮೇ 2021, 3:52 IST
Last Updated 3 ಮೇ 2021, 3:52 IST
ಸಿಂಧನೂರಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಭಾನುವಾರ ಭೇಟಿ ನೀಡಿ ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತರ ಆರೋಗ್ಯ ವಿಚಾರಿಸಿದರು
ಸಿಂಧನೂರಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಭಾನುವಾರ ಭೇಟಿ ನೀಡಿ ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತರ ಆರೋಗ್ಯ ವಿಚಾರಿಸಿದರು   

ಸಿಂಧನೂರು: ‘ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಗೆದ್ದ ತಕ್ಷಣವೇ ಕಾಂಗ್ರೆಸ್‌ನವರು ಹಲವು ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ, ಗೂಂಡಾಗಿರಿ ಆರಂಭಿಸಿದ್ದಾರೆ’ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಆರೋಪಿಸಿದರು.

ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಭಾನುವಾರ ಸಂಜೆ ಭೇಟಿ ನೀಡಿದ ಅವರು ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕಾಂಗ್ರೆಸ್ ಮುಖಂಡರಾದ ಪಂಪನಗೌಡ, ದಿನೇಶ್‍ಗೌಡ ನೇತೃತ್ವದಲ್ಲಿ 50 ಜನರು ಸೇರಿ ‘ಗುಂಡಾ’ ಗ್ರಾಮದ ಬಿಜೆಪಿ ಕಾರ್ಯಕರ್ತರಾದ ಅಮರೇಶ ಅಮರಣ್ಣ, ಗಣೇಶ ತಿರುಪತೆಪ್ಪ, ಅಮರೇಶ ಹನುಮಂತ ಮತ್ತು ಗಂಗಪ್ಪ ಕಬೀರಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಆಸ್ಪತ್ರೆಗೆ ಕಳುಹಿಸುವುದಾಗಿ ವೈದ್ಯರು ತಿಳಿಸಿದ್ದಾರೆ’ ಎಂದರು.

ADVERTISEMENT

‘ಕೋಳಬಾಳ, ತುಗ್ಗಲದಿನ್ನಿ, ರತ್ನಾಪುರ, ಕಳಚಿಮ್ಮಿ ಹೀಗೆ ಹತ್ತಾರು ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ. ಮೂರು ಬಾರಿ ಶಾಸಕನಾಗಿದ್ದರೂ ನಾನು ಅಹಿತಕರ ಘಟನೆ ಮತ್ತು ಹಿಂಸೆಗೆ ಅವಕಾಶ ನೀಡಿರಲಿಲ್ಲ. ಆದರೆ ಚುನಾವಣೆಯಲ್ಲಿ ಗೆದ್ದ ಒಂದೇ ದಿನದಲ್ಲಿ ಗೂಂಡಾಗಿರಿ ನಡೆಸಿರುವುದನ್ನು ಮತದಾರರು ಗಮನಿಸಬೇಕು’ ಎಂದರು.

ಮುಖಂಡರಾದ ಬಸವಂತರಾಯ ಕುರಿ, ಅಮರೇಶ ಗಚ್ಚಿನಮನಿ ಹಾಗೂ ಅಮರೇಶಗೌಡ ರತ್ನಾಪುರ ಇದ್ದರು.

ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.