ADVERTISEMENT

ವೀರಶೈವ ಲಿಂಗಾಯತ ಜಂಗಮರಿಗೆ ಎಸ್‌.ಸಿ ಜಾತಿ ಪ್ರಮಾಣ ಪತ್ರ ನೀಡಬೇಡಿ: ಪ್ರತಿಭಟನೆ

ಪರಿಶಿಷ್ಟ ಜಾತಿಗಳ ಮೀಸಲಾತಿ ಸಂರಕ್ಷಣಾ ಸಮಿತಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 5:20 IST
Last Updated 26 ಜುಲೈ 2022, 5:20 IST
ಸಿರವಾರದಲ್ಲಿ ‌ಪರಿಶಿಷ್ಟ ಜಾತಿಗಳ ಮೀಸಲಾತಿ ಸಂರಕ್ಷಣಾ ಸಮಿತಿಯ ತಾಲ್ಲೂಕು ಒಕ್ಕೂಟದ ಪದಾಧಿಕಾರಿಗಳು ತಹಶೀಲ್ದಾರ್ ವಿಜಯೇಂದ್ರ ಹುಲಿನಾಯಕ ಅವರಿಗೆ ಮನವಿ ಸಲ್ಲಿಸಿದರು
ಸಿರವಾರದಲ್ಲಿ ‌ಪರಿಶಿಷ್ಟ ಜಾತಿಗಳ ಮೀಸಲಾತಿ ಸಂರಕ್ಷಣಾ ಸಮಿತಿಯ ತಾಲ್ಲೂಕು ಒಕ್ಕೂಟದ ಪದಾಧಿಕಾರಿಗಳು ತಹಶೀಲ್ದಾರ್ ವಿಜಯೇಂದ್ರ ಹುಲಿನಾಯಕ ಅವರಿಗೆ ಮನವಿ ಸಲ್ಲಿಸಿದರು   

ಸಿರವಾರ: ಪರಿಶಿಷ್ಟರಲ್ಲದ ವೀರಶೈವ ಲಿಂಗಾಯತ ಜಂಗಮರಿಗೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡುತ್ತಿರುವುದನ್ನು ಖಂಡಿಸಿ ಪರಿಶಿಷ್ಟ ಜಾತಿಗಳ ಮೀಸಲಾತಿ ಸಂರಕ್ಷಣಾ ಸಮಿತಿಯ ತಾಲ್ಲೂಕು ಒಕ್ಕೂಟದ ಪದಾಧಿಕಾರಿಗಳು ತಹಶೀಲ್ದಾರ್ ವಿಜಯೇಂದ್ರ ಹುಲಿನಾಯಕ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ,‘ವೀರಶೈವ ಲಿಂಗಾಯತ ಜಂಗಮರು ಅಸ್ಪೃಶ್ಯರಲ್ಲ. ಬೇಡ ಜಂಗಮರಲ್ಲ. ಅವರು ಉತ್ತಮ ಸಾಮಾಜಿಕ ಸ್ಥಾನಮಾನ ಹೊಂದಿದ್ದು, ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿದಿದ್ದಾರೆ. ಪರಿಶಿಷ್ಟ ಜಾತಿ ಬೇಡ ಜಂಗಮರೊಂದಿಗೆ ಹೋಲಿಸಿಕೊಂಡು ಮೀಸಲಾತಿ ಕಬಳಿಸಲು ಮುಂದಾಗಿರುವುದು ಖಂಡನೀಯ’ ಎಂದು ತಿಳಿಸಿದ್ದಾರೆ.

ಈಗಾಗಲೇ ವೀರಶೈವ ಲಿಂಗಾಯತ ಜಂಗಮರು ಪಡೆದ ಪರಿಶಿಷ್ಟ ಜಾತಿ ಪ್ರಮಾಣಪತ್ರ ವಾಪಸ್‌ ಪಡೆಯಬೇಕು. ಸರ್ಕಾರದ ಒತ್ತಡಕ್ಕೆ ಮಣಿದು ವೀರಶೈವ ಲಿಂಗಾಯತ ಜಂಗಮರಿಗೆ ಎಸ್ಸಿ ಪ್ರಮಾಣಪತ್ರ ನೀಡಿದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ಬಸವೇಶ್ವರ ವೃತ್ತದಿಂದ ತಹಶೀಲ್ ಕಚೇರಿಯವರಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ಎಸ್‌.ಸಿ ಸಮುದಾಯದ ಹಗಲು ವೇಷಗಾರ ಕಲಾವಿದರು ವೇಷಗಳನ್ನು ಧರಿಸಿ ಪ್ರತಿಭಟಿಸಿದರು.

ಅಬ್ರಾಹಂ ಹೊನ್ನಟಗಿ, ಎಂ.ಪ್ರಕಾಶಪ್ಪ, ಎಂ.ಮನೋಹರ, ಜಯಪ್ಪ ಗುತ್ತೆದಾರ್, ಡಿ.ಜಯಪ್ಪ, ಲಂಕೇಶ ಮರಾಟ, ಎಲ್.ವಿ.ಸುರೇಶ, ಡಿ.ಯಮನೂರು, ಬಸವರಾಜ ಭಂಡಾರಿ, ಅರಳಪ್ಪ, ದುರುಗಪ್ಪ, ಅಮರೇಶ ಮುರ್ಕಿಗುಡ್ಡ, ಮಲ್ಲಪ್ಪ ನವಲಕಲ್ಲು ಗ್ಯಾನಪ್ಪ, ತಿಪ್ಪಣ್ಣ ಚಲವಾದಿ, ಹನುಮಂತ ಸೈನ್ಯ, ಅಜಿತ್ ಹೊನ್ನಟಗಿ, ಸೋಮಣ್ಣ ಪವಾರ್ ಸೇರಿ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.