
ರಾಯಚೂರು: ರಾಯಚೂರು ಸೇರಿ ಸುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ಉಚಿತ ತರಬೇತಿ ತರಗತಿಗಳು ಶನಿವಾರ ಆರಂಭಗೊಂಡವು.
ತರಬೇತಿಯ ಮೊದಲ ದಿನ ಉಪವಿಭಾಗಾಧಿಕಾರಿ ಗಜಾನನ ಬಾಳೆ ತರಬೇತಿಗೆ ಆಯ್ಕೆಯಾದ 120 ವಿದ್ಯಾರ್ಥಿಗಳೊಂದಿಗೆ ನೇರ ಸಂವಹನ ನಡೆಸಿದರು. ತರಬೇತಿಯ ಪಾಠಗಳು, ತರಬೇತಿಯ ಪ್ರತಿದಿನದ ಸಮಯ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಅವರು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.
ನಂತರ ‘ಭಾರತೀಯ ಸಂವಿಧಾನ’ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗ ಶರಣು ಭಾಗೂರ ತರಗತಿ ಆರಂಭಿಸಿದರು.
ತರಬೇತಿಯ ನೋಡಲ್ ಅಧಿಕಾರಿ ಆಗಿರುವ ತಹಶೀಲ್ದಾರ್ ಸುರೇಶ ವರ್ಮಾ, ಅಮರೇಶ ಬಿರಾದಾರ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಪ್ರವೀಣಕುಮಾರ, ವಿವಿಧ ಸಮಿತಿಯಲ್ಲಿರುವ ಅಧಿಕಾರಿಗಳಾದ ಜಿಲ್ಲಾ ಗ್ರಂಥಾಲಯ ಇಲಾಖೆಯ ಅಧಿಕಾರಿಗಳಾದ ಡಾ.ಕಲಾಲ, ನಿರ್ಮಲಾ ಹೆಚ್ ಹೊಸೂರ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಈರೇಶ್ ನಾಯಕ, ಆಹಾರ ಇಲಾಖೆಯ ಅಧಿಕಾರಿ ನಜೀರ್ ಅಹ್ಮದ್, ಹಟ್ಟಿ ಚಿನ್ನದ ಗಣಿ ಕಂಪನಿಯ ಉಪ ಪ್ರಧಾನ ವ್ಯವಸ್ಥಾಪಕರು ಹಾಗೂ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಕೃಷ್ಣ ಶಾವಂತಗೇರಿ, ಸ್ಥಳೀಯ ಲೆಕ್ಕ ಪರಿಶೋಧನಾ ಇಲಾಖೆಯ ಚಂದಪ್ಪ, ಅರಣ್ಯ ಇಲಾಖೆಯ ಮಹೇಂದ್ರ ಉಪಸ್ಥಿತರಿದ್ದು ತರಗತಿಯ ಆರಂಭದ ಪ್ರಕ್ರಿಯೆಯ ಬಗ್ಗೆ ಸಮನ್ವಯ ನಡೆಸಿದರು.
ಭಾನುವಾರ ಸಹ ಪಾಠಗಳು ನಡೆದವು. ನವೆಂಬರ್ 24 ಮತ್ತು 25ರಂದು ಸಂವಿಧಾನ, 26ರಂದು ನಾಲ್ಕು ದಿನಗಳ ಕಾಲ ಸಾಮಾನ್ಯ ವಿಜ್ಞಾನ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿ ನಿರಂಜನ ಮೂರ್ತಿ ಟಿ ಪಾಠ ಮಾಡಲಿದ್ದಾರೆ. 30ರಿಂದ ಡಿಸೆಂಬರ್ 3ರವರೆಗೆ ಅರ್ಥಶಾಸ್ತ್ರ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿ ಸುನೀಲ್ ರಾಠೋಡ್ ಪಾಠ ಮಾಡಲಿದ್ದಾರೆ. ಡಿಸೆಂಬರ್ 4 ರಿಂದ ಡಿಸೆಂಬರ್ 7ರವರೆಗೆ ಭೂಗೋಳಶಾಸ್ತ್ರ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿ ಅನಿಲ್ ಪಾಠ ಮಾಡಲಿದ್ದಾರೆ. ಡಿಸೆಂಬರ್ 8 ರಿಂದ 11ರವರೆಗೆ ಮಾನಸಿಕ ಸಾಮರ್ಥ್ಯ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿ ಗಿರೀಶ್ ಪಾಠ ಮಾಡಲಿದ್ದಾರೆ.
ಜಿಲ್ಲಾಧಿಕಾರಿ ಮನವಿ: ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯ ಪರಿಸರ ಮೂಡಿಸುವ ನಿಟ್ಟಿನಲ್ಲಿ ಉಚಿತ ತರಬೇತಿ ಕಾರ್ಯಕ್ರಮ ಆಯೋಜಿಸಿದೆ. ತರಬೇತಿಗೆ ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳು ತರಬೇತಿ ಪೂರ್ಣವಾಗುವವರೆಗೆ ಸಕ್ರಿಯವಾಗಿ ಭಾಗಿಯಾಗಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೀಶ್ ಕೆ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.