ರಾಯಚೂರು: ತುಂಗಭದ್ರಾ ಜಲಾಶಯದಿಂದ 1,40,000 ಕ್ಯೂಸೆಕ್ ನೀರು ಹರಿಸುವ ಸಾಧ್ಯತೆ ಇರುವ ಕಾರಣ ತುಂಗಭದ್ರಾ ನದಿಯ ಕೆಳಭಾಗದ ಹಳ್ಳಿಗಳ ಜನರಿಗೆ ತೊಂದರೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಸೂಚನೆ ನೀಡಿದ್ದಾರೆ.
ತುಂಗಭದ್ರಾ ಜಲಾಶಯದ ಅಧಿಕಾರಿಗಳಿಂದ ಎಚ್ಚರಿಕೆ ಸಂದೇಶ ಬಂದಿರುವುದರಿಂದ ಅಧಿಕಾರಿಗಳು, ತುಂಗಭದ್ರಾ ಅಣೆಕಟ್ಟಿನ ಕೆಳಭಾಗದ ಪ್ರದೇಶದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದ್ದಾರೆ.
ಶೀಲಹಳ್ಳಿ ಸೇತುವೆ ಮುಳುಗಡೆ: ರಾಯಚೂರು ಜಿಲ್ಲೆಯಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದೆ. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ 8 ಮಿ.ಮೀ ಹಾಗೂ ಲಿಂಗಸುಗೂರು ಪಟ್ಟಣದಲ್ಲಿ 4.9 ಮಿ.ಮೀ ಮಳೆಯಾಗಿದೆ.
ರಾಯಚೂರು ತಾಲ್ಲೂಕಿನಲ್ಲಿ 7 ಮಿ.ಮೀ, ಸಿರವಾರ ತಾಲ್ಲೂಕಿನಲ್ಲಿ 6.6 ಮಿ.ಮೀ, ಮಾನ್ವಿ ತಾಲ್ಲೂಕಿನಲ್ಲಿ 5.8 ಮಿ.ಮೀ, ದೇವದುರ್ಗ ತಾಲ್ಲೂಕಿನಲ್ಲಿ 4.6 ಮಿ.ಮೀ, ಸಿಂಧನೂರು ತಾಲ್ಲೂಕಿನಲ್ಲಿ 1.4 ಮಿ.ಮೀ ಮಳೆಯಾಗಿದೆ.
ನಾರಾಯಣಪುರ ಜಲಾಶಯದಿಂದ ನೀರು ಬಿಟ್ಟಿರುವ ಕಾರಣ ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು, ಇದರಿಂದಾಗಿ ನಾಲ್ಕು ಗ್ರಾಮಗಳ ಯಳಗುಂದಿ, ಹಂಚಿನಾಳ, ಕಡದರಗಡ್ಡಿ, ಯರಗೋಡಿ ನೇರ ಸಂಪರ್ಕ ಕಡಿದು ಹೋಗಿದೆ.
ನಗರದಲ್ಲಿ ಮುಂದುವರಿದ ಮಳೆ: ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ರಾಯಚೂರು ನಗರ ಪ್ರದೇಶದಲ್ಲಿ ಸಾಧಾರಣ ಮಳೆ ಮುಂದುವರಿದಿದೆ.
ಮಳೆಗೆ ನಗರದ ರಸ್ತೆಗಳು ಕೆಸರುಮಯವಾಗಿದೆ. ಅನೇಕ ರಸ್ತೆಗಳ ಮಧ್ಯೆ ಗುಂಡಿಗಳು ಬಿದ್ದಿವೆ. ನೌಕರರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕೊಡೆ ಹಿಡಿದುಕೊಂಡು ತೆರಳಬೇಕಾಯಿತು. ಮೂರು ದಿನಗಳಿಂದ ಸೂರ್ಯನ ದರ್ಶನವಾಗಿಲ್ಲ.
ಶನಿವಾರದ ವರೆಗೂ ದಟ್ಟ ಮೋಡಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.