ADVERTISEMENT

ರಾಯಚೂರು | ಮಾರುಕಟ್ಟೆ ವಿಶ್ಲೇಷಣೆ: ಬಹುತೇಕ ತರಕಾರಿ ಬೆಲೆ ತುಸು ಹೆಚ್ಚಳ

ಚಂದ್ರಕಾಂತ ಮಸಾನಿ
Published 15 ಮೇ 2025, 5:55 IST
Last Updated 15 ಮೇ 2025, 5:55 IST
ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುತ್ತಿರುವ ಗ್ರಾಹಕರು
ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುತ್ತಿರುವ ಗ್ರಾಹಕರು   

ರಾಯಚೂರು: ಜಿಲ್ಲೆಯಲ್ಲಿ ಅಲ್ಲಲ್ಲಿ ಆಗೊಮ್ಮೆ, ಈಗೊಮ್ಮೆ ಜಿಟಿ ಜಿಟಿ ಮಳೆ ಸುರಿದಿದ್ದರೂ ಬಿಸಿಲಿನ ತಾಪ ಹಾಗೂ ಸೆಖೆ ಕಡಿಮೆಯಾಗಿಲ್ಲ. ರಾಯಚೂರಿಗೆ ಹೊರ ಜಿಲ್ಲೆಗಳಿಂದಲೇ ತರಕಾರಿ ಬರುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಬಹುತೇಕ ತರಕಾರಿ ಬೆಲೆ ತುಸು ಹೆಚ್ಚಾಗಿದೆ.

ಗ್ರಾಹಕರ ಅಚ್ಚುಮೆಚ್ಚಿನ ತರಕಾರಿಗಳ ಬೆಲೆ ಪ್ರತಿ ಕೆಜಿಗೆ ₹20 ಏರಿಕೆಯಾಗಿದೆ. ಪುಲಾವ್‌ಗೆ ಅಗತ್ಯವಿರುವ ಬೀನ್ಸ್‌ ಪ್ರತಿ ಕೆ.ಜಿಗೆ ₹120ಗೆ ಮಾರಾಟವಾಗುತ್ತಿದೆ. ಜಿಲ್ಲೆಯ ಜನ ಅನ್ನ ಹಾಗೂ ಟೊಮೊಟೊ ಸಾರು ಹೆಚ್ಚು ಇಷ್ಟ ಪಡುವ ಕಾರಣ ಟೊಮೊಟೊ ಬೆಲೆಯಲ್ಲೂ ಕೊಂಚ ಹೆಚ್ಚಳವಾಗಿದೆ.

ಹೂಕೋಸು, ಗಜ್ಜರಿ, ಬೀಟ್‌ರೂಟ್‌, ಬೀನ್ಸ್, ಹಿರೇಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಡೊಣಮೆಣಸಿನಕಾಯಿ, ತುಪ್ಪದ ಹಿರೇಕಾಯಿ, ಚವಳೆಕಾಯಿ ಹಾಗೂ ಸೌತೆಕಾಯಿ ಪ್ರತಿ ಕ್ವಿಂಟಲ್‌ಗೆ ₹2 ಸಾವಿರ, ಈರುಳ್ಳಿ, ಆಲೂಗಡ್ಡೆ, ಟೊಮೆಟೊ ₹ 500, ಮೆಣಸಿನಕಾಯಿ, ಎಲೆಕೋಸು, ಬದನೆಕಾಯಿ ₹ 1 ಸಾವಿರ ಹೆಜ್ಜಾಗಿದೆ.

ADVERTISEMENT

ಮಹಾರಾಷ್ಟ್ರದ ನಾಸಿಕ್‌ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ. ಬೆಳಗಾವಿಯ ಸಗಟು ತರಕಾರಿ ಮಾರುಕಟ್ಟೆಯಿಂದ ಹಸಿ ಮೆಣಸಿನಕಾಯಿ, ಕೊತಂಬರಿ, ಮೆಂತೆ ಸೊಪ್ಪು ಬಂದಿದೆ. ನೆರೆಯ ಜಿಲ್ಲೆ ಹಾಗೂ ರಾಯಚೂರು ಗ್ರಾಮೀಣ ಪ್ರದೇಶದಿಂದ ಹಿರೇಕಾಯಿ, ಗಜ್ಜರಿ, ಅವರೆಕಾಯಿ, ಸೋರೆಕಾಯಿ, ಸೌತೆಕಾಯಿ, ಎಲೆಕೋಸು, ಹೂಕೋಸು ಆವಕವಾಗಿದೆ.

‘ಬೆಳಗಾವಿ ಜಿಲ್ಲೆ, ತೆಲಂಗಾಣದ ಕೆಲ ಜಿಲ್ಲೆಗಳಿಂದ ತರಕಾರಿ ರಾಯಚೂರು ಮಾರುಕಟ್ಟೆಗೆ ತರಕಾರಿ ಬಂದಿದೆ. ಬಿಸಿಲು ಅಧಿಕವಿರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬರುತ್ತಿಲ್ಲ. ಹೀಗಾಗಿ ರಮುಖ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿದೆ‘ ಎಂದು ತರಕಾರಿ ವ್ಯಾಪಾರಿ ರಾಜು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.