
ರಾಯಚೂರು: ‘ಕಾಗದ ಕತ್ತರಿ ಕಲೆಯು ಮಕ್ಕಳ ಶೈಕ್ಷಣಿಕ ಕಲಿಕೆಗೆ ಸಹಾಯಕವಾಗಿದೆ’ ಎಂದು ಮೈಸೂರಿನ ಸಂಪನ್ಮೂಲ ವ್ಯಕ್ತಿ ಎಸ್.ಎಸ್.ಹುಸೇನ್ ಅಭಿಪ್ರಾಯಪಟ್ಟರು.
ಇಲ್ಲಿನ ಸ್ಟೇಷನ್ ಬಜಾರ ಶಾಲೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಜನಪದ ಕಾಗದ ಕತ್ತರಿ ಕಲೆಯ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಜನಪದ ಕಾಗದ ಕತ್ತರಿ ಕಲೆಯಿಂದ ಸೃಜನಶೀಲತೆ, ಕ್ರಿಯಾಶೀಲತೆ ಹೊರಹೊಮ್ಮುತ್ತದೆ. ಕಲೆಯ ಬಗ್ಗೆ ಆಸಕ್ತಿ, ಏಕಾಗ್ರತೆ ಮತ್ತು ಸ್ಮರಣ ಶಕ್ತಿ ವೃದ್ಧಿಸುತ್ತದೆ. ತಾಳ್ಮೆ, ಒತ್ತಡ ನಿವಾರಣೆಯಾಗುತ್ತದೆ’ ಎಂದರು.
‘ಕತ್ತರಿಯನ್ನು ಸುರಕ್ಷಿತವಾಗಿ ಬಳಸುವ ಕಲಿಕೆ, ಕಾಗದ ಮಡಚಿ ಕತ್ತರಿಸುವುದರಿಂದ ಜ್ಯಾಮಿತಿಯ ವಿವಿಧ ಆಕಾರಗಳ ಪರಿಚಯ, ಚೌಕಾಕಾರ, ತ್ರಿಭುಜ, ಆಯತಾಕಾರ ಹಾಗೂ ಮುಂತಾದವುಗಳ ಬಗ್ಗೆ ಅರಿವು, ಕಾಗದವನ್ನು ಒಂದಕ್ಕಿಂತ ಹೆಚ್ಚು ಬಾರಿ ಮಡಚಿ ಕತ್ತರಿಸುವುದರಿಂದ ಸಮರೂಪದ (ಸೆಮಿಟ್ಟಿಕಲ್) ಅನೇಕ ಮಾದರಿಗಳು ದೊರೆಯುತ್ತದೆ’ ಎಂದು ಹೇಳಿದರು.
‘ಹಬ್ಬಗಳ ಸಂದರ್ಭದಲ್ಲಿ ಗೃಹ ಅಲಂಕಾರ, ಶಾಲೆ–ಕಚೇರಿಗಳ ಅಲಂಕಾರಕ್ಕೆ ಬೇಕಾಗುವ ರಂಗೋಲಿ ವಿನ್ಯಾಸ, ತೋರಣ, ಮಂಟಪಗಳ ಅಲಂಕಾರ, ಪ್ರಭಾವಳಿ ವಿನ್ಯಾಸಗಳ ರಚನೆ ಹಾಗೂ ಇನ್ನೂ ಹಲವಾರು ಕಾರ್ಯಕ್ರಮಗಳಿಗೆ ಬಹು ಉಪಯೋಗಿಯಾಗಿದೆ’ ಎಂದು ಹೇಳಿದರು.
ಪ್ರಮುಖರಾದ ರಾಘವೇಂದ್ರ, ಮುದ್ದನಗೌಡ, ಸೂಗುರಯ್ಯ, ಮುತ್ತಣ್ಣ, ಜ್ಯೋತಿ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.