ADVERTISEMENT

3 ಬಾರಿ ಆರ್‌ಎಸ್‌ಎಸ್‌ ನಿಷೇಧಿಸಿ ಕಾಂಗ್ರೆಸ್‌ ತಾಕತ್ತು ತೋರಿಸಿದೆ: ವಸಂತಕುಮಾರ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 8:26 IST
Last Updated 15 ಅಕ್ಟೋಬರ್ 2025, 8:26 IST
ಎ.ವಸಂತಕುಮಾರ
ಎ.ವಸಂತಕುಮಾರ   

ರಾಯಚೂರು: ‘ಕಾಂಗ್ರೆಸ್‌ಗೆ ಧಮ್ಮು ಹಾಗೂ ತಾಕತ್ತು ಇದ್ದದ್ದರಿಂದಲೇ ದೇಶದಲ್ಲಿ ಮೂರು ಬಾರಿ ಆರ್‌ಎಸ್‌ಎಸ್‌ ನಿಷೇಧಿಸಿತ್ತು. ಬಿಜೆಪಿ ನಾಯಕರು ಇತಿಹಾಸ ಅರಿತು ಮಾತನಾಡಬೇಕು‘ ಎಂದು ವಿಧಾನ ಪರಿಷತ್‌ ಸದಸ್ಯರೂ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ ವಾಗ್ದಾಳಿ ನಡೆಸಿದರು.

‘ಮೂರು ಬಾರಿಯೂ ಮುಚ್ಚಳಿಕೆ ಬರೆದುಕೊಟ್ಟ ಕಾರಣ ನಿರ್ಬಂಧ ಸಡಿಸಲಾಗಿತ್ತು’ ಎಂದು ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು.

‘1948ರಲ್ಲಿ ಕೇಂದ್ರ ಗೃಹ ಸಚಿವ ಸರ್ದಾರ್‌ ವಲ್ಲಭಭಾಯಿ ಪಟೇಲ್, 1977ರಲ್ಲಿ ತುರ್ತು ಪರಿಸ್ಥಿತಿ ಹಾಗೂ 1996ರಲ್ಲಿ ಪಿ.ವಿ.ನರಸಿಂಹರಾವ್‌ ಪ್ರಧಾನಿಯಾಗಿದ್ದಾಗ ಆರ್‌ಎಸ್‌ಎಸ್‌ ನಿಷೇಧಿಸಲಾಗಿತ್ತು. ಬಿಜೆಪಿ ನಾಯಕ ಆರ್‌.ಅಶೋಕ ಅವರು ಪರಾಮರ್ಶೆ ಮಾಡಿಕೊಳ್ಳಲಿ‘ ಎಂದರು.

ADVERTISEMENT

‘ಆರ್‌ಎಸ್‌ಎಸ್‌ ಅಸ್ತಿತ್ವಕ್ಕೆ ಬಂದು 100 ವರ್ಷಗಳಾದರೆ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ. 75 ವರ್ಷಗಳ ಅವಧಿಯಲ್ಲಿ ಹಿಂದೂ ರಾಷ್ಟ್ರ ನಿರ್ಮಾಣ ಸಾಧ್ಯವಾಯಿತೆ? ಬಿಜೆಪಿ ಮುಖಂಡರಿಗೆ ಕನಿಷ್ಠ ತಿಳಿವಳಿಕೆಯೂ ಇಲ್ಲ’ ಎಂದು ಟೀಕಿಸಿದರು.

‘ಆರ್‌ಎಸ್‌ಎಸ್‌ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿಲ್ಲ. ಧರ್ಮದ ಹೆಸರಿನಲ್ಲಿ ಸಮುದಾಯವನ್ನು ಒಡೆಯುವ ಕೆಲಸವನ್ನು ಮಾಡಿಕೊಂಡು ಬಂದಿದೆ. ಮಹಾತ್ಮಾ ಗಾಂಧಿ ಹತ್ಯೆ, ಬಾಬರಿಮಸೀದಿ ಧ್ವಂಸ ಹಾಗೂ ಕೋಮುಗಲಭೆ ಸೃಷ್ಟಿಯಂತಹ ಕೃತ್ಯಗಳಿಗೆ ಆರ್‌ಎಸ್‌ಎಸ್‌ನಂತಹ ಸಂಘಟನೆಯೇ ಕಾರಣ’ ಎಂದು ಆರೋಪ ಮಾಡಿದರು.

‘ಆರ್‌ಎಸ್‌ಎಸ್‌ ಸ್ವಾತಂತ್ರ್ಯ ಪೂರ್ವದಿಂದಲೂ ಬ್ರಿಟಿಷರ ಪರವಾಗಿ ಕೆಲಸ ಮಾಡಿಕೊಂಡು ಬಂದಿದೆ. ದ್ವೇಷ ಭಾವನೆ ಹುಟ್ಟಿಸಿ ಪ್ರಚೋಧಿಸುವ ಕೆಲಸವನ್ನು ಮಾಡುತ್ತಿದೆ. ಅಂತೆಯೇ ಸಚಿವ ಪ್ರಿಯಾಂಕ ಖರ್ಗೆ ಅವರು ಸಾರ್ವಜನಿಕ ಸ್ಥಳದಲ್ಲಿ ಆರ್‌ಎಸ್‌ಎಸ್‌ನ ಚಟುವಟಿಕೆ ನಿಷೇಧಿಸುವಂತೆ ಪತ್ರ ಬರೆದಿದ್ದಾರೆ. ಅದಕ್ಕೆ ನಮ್ಮ ಬೆಂಬಲವೂ ಇದೆ‘ ಎಂದು ಹೇಳಿದರು.

ಕಾಂಗ್ರೆಸ್‌ನಿಂದ ಸುಳ್ಳು ಆರೋಪ

‘ಆರ್‌ಎಸ್‌ಎಸ್‌ನ ನೂರು ವರ್ಷಗಳ ಸಾಧನೆ ಹಾಗೂ ಬೆಳವಣಿಗೆ ಸಹಿಸಿಕೊಳ್ಳದೇ ಕಾಂಗ್ರೆಸ್‌ ಸುಳ್ಳು ಆರೋಪಗಳನ್ನು ಮಾಡುತ್ತಿದೆ‘ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ ಟೀಕಿಸಿದರು.

‘ಆರ್‌ಎಸ್‌ಎಸ್‌ ಸ್ವಾತಂತ್ರ್ಯ ಪೂರ್ವದಿಂದಲೇ ಸ್ವಯಂ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಧರ್ಮದ ಆಚರಣೆಗೆ ಹಾಗೂ ನಂಬಿಕೆಗೆ ಅವಕಾಶವಿದೆ’ ಎಂದು ನಗರದಲ್ಲಿ ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

‘ಸಚಿವ ಪ್ರಿಯಾಂಕ ಖರ್ಗೆ ಅವರು ಪಕ್ಷದ ಹೈಕಮಾಂಡ ಓಲೈಸಿ ರಾಜಕೀಯ ಸ್ಥಾನ ಪಡೆಯುವ ಉದ್ದೇಶದಿಂದ ಮೂರ್ಖತನ ಪ್ರದರ್ಶಿಸಿದ್ದಾರೆ’ ಎಂದು ಟೀಕಿಸಿದರು.

ವೀರನಗೌಡ ಲೆಕ್ಕಿಹಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.