ADVERTISEMENT

ಸಿಂಧನೂರು | ಮಹಿಳಾ ಕಾಲೇಜು: ಮೂಲಸೌಕರ್ಯ ಕೊರತೆ

ಸಿಂಧನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರ ಅಳಲು

ಡಿ.ಎಚ್.ಕಂಬಳಿ
Published 17 ಡಿಸೆಂಬರ್ 2024, 5:29 IST
Last Updated 17 ಡಿಸೆಂಬರ್ 2024, 5:29 IST
<div class="paragraphs"><p><strong>ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಹೊರನೋಟ</strong></p></div>

ಸಿಂಧನೂರಿನ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಹೊರನೋಟ

   

ಸಿಂಧನೂರು: ನಗರದ ಕುಷ್ಟಗಿ ಮಾರ್ಗದ ರಸ್ತೆಯಲ್ಲಿರುವ ಸರ್ಕೀಟ್ ಹೌಸ್‌ ಪಕ್ಕದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಅಗತ್ಯ ಮೂಲಸೌಕರ್ಯಗಳು ಮರೀಚಿಕೆಯಾಗಿದ್ದು, ವಿದ್ಯಾರ್ಥಿನಿಯರ ಅಳಲು ಕೇಳುವವರು ಇಲ್ಲದಂತಾಗಿದೆ.

ಸೌಕರ್ಯಗಳ ಕೊರತೆ ಒಂದೆಡೆಯಾದರೆ, ಉಪನ್ಯಾಸಕರ ಕೊರತೆ ಮತ್ತೊಂದೆಡೆಯಾಗಿದೆ. ಇದರಿಂದ ತಮ್ಮ ಪರೀಕ್ಷಾ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ.

ADVERTISEMENT

ಬಹುಪಾಲು ವಿದ್ಯಾರ್ಥಿನಿಯರು ಗ್ರಾಮೀಣ ಪ್ರದೇಶದಿಂದ ಬರುತ್ತಿದ್ದು, ಕಾಲೇಜು ಬಳಿ ಬಸ್‍ಗಳು ನಿಲುಗಡೆ ಮಾಡದಿರುವುದರಿಂದ ಖಾಸಗಿ ವಾಹನಗಳಿಗೆ ಹಣ ಕೊಟ್ಟು ಬರಲು ತೊಂದರೆ ಅನುಭವಿಸುತ್ತಿದ್ದಾರೆ.

ಕಾಲೇಜಿನಲ್ಲಿ ಬಿಎ, ಬಿಕಾಂ ಹಾಗೂ ಬಿಎಸ್ಸಿ ಪದವಿಯಲ್ಲಿ 331 ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದು, 4 ಜನ ಕಾಯಂ ಹಾಗೂ 16 ಜನ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಹಾಗೂ ಭೂವಿಜ್ಞಾನ (ಜಿಯೊಲಾಜಿ), ಕಾಮರ್ಸ್ ವಿಷಯದ ತಲಾ ಒಬ್ಬ ಉಪನ್ಯಾಸಕರ ಕೊರತೆಯಿದೆ. ಆದಾಗ್ಯೂ ತಮ್ಮ ಸಮಸ್ಯೆಯನ್ನು ಯಾರು ಕೇಳುತ್ತಿಲ್ಲವೆಂದು ವಿದ್ಯಾರ್ಥಿನಿ ದಾಕ್ಷಾಯಿಣಿ ಆಕ್ರೋಶ ವ್ಯಕ್ತಪಡಿಸಿದರು.

ಕೊಠಡಿ ನಿರ್ಮಾಣ ಆಮೆಗತಿ: ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ಕೊಠಡಿ ನಿರ್ಮಾಣ ಕಾರ್ಯ ಸಾಗಿದ್ದು, ಆಮೆಗತಿಯಲ್ಲಿ ನಡೆದಿದೆ. ಕಳೆದ ನಾಲ್ಕಾರು ವರ್ಷಗಳಿಂದ ಕಟ್ಟಡಗಳು ನಿರ್ಮಾಣ ಹಂತದಲ್ಲಿಯೇ ಇವೆ. ಈ ಕಟ್ಟಡಗಳ ನಿರ್ಮಾಣ ಕಾರ್ಯ ಮುಗಿದು, ವಿದ್ಯಾರ್ಥಿನಿಯರ ಬೋಧನೆಗೆ ದೊರೆಯವುದು ಯಾವಾಗ? ಎಂದು ಪಾಲಕರು ಪ್ರಶ್ನಿಸಿದರು.

ಮೂಲ ಸೌಕರ್ಯ ಕಲ್ಪಿಸಲಿ: ಮಹಿಳಾ ಕಾಲೇಜಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಖುದ್ದು ಭೇಟಿ ನೀಡಿ ಸಮಸ್ಯೆಗಳನ್ನು ಪಟ್ಟಿಮಾಡಬೇಕು. ಉಪನ್ಯಾಸಕರ ಕೊರತೆ, ಮೂಲ ಸೌಕರ್ಯಗಳ ಅಭಾವ, ಸುರಕ್ಷತೆಯ ದೃಷ್ಟಿಯಿಂದ ಕೂಡಲೇ ಕ್ರಮ ಕೈಗೊಳ್ಳಬೇಕು. ಆದಷ್ಟು ಬೇಗ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು. ಕಾಲೇಜಿನ ಸುತ್ತಲೂ ಕಾಂಪೌಂಡ್ ನಿರ್ಮಿಸಬೇಕು. ಉಪನ್ಯಾಸಕರನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸುತ್ತಾರೆ ಅಖಿಲ ಭಾರತ ವಿದ್ಯಾರ್ಥಿ ಫೆಡರೇಶನ್ ಮುಖಂಡ ಗೋವಿಂದ.

ವಿದ್ಯಾರ್ಥಿನಿಯರ ಸುರಕ್ಷತೆಗೆ ನಿರ್ಲಕ್ಷ್ಯ

ಕಾಲೇಜಿನ ಸುತ್ತಮುತ್ತಲೂ ಮುಳ್ಳು ಬೇಲಿಗಳಿದ್ದು, ಆವರಣದ ಸುತ್ತಲೂ ಕಾಂಪೌಂಡ್ ಇಲ್ಲ. ಇದರಿಂದ ಸುತ್ತಮುತ್ತಲಿನ ಜಾನುವಾರುಗಳು ಕಾಲೇಜು ಆವರಣಕ್ಕೆ ನುಗ್ಗುತ್ತವೆ. ಕೆಲವೊಂದು ಬಾರಿ ಮುಳ್ಳುಬೇಲಿಗಿಂದ ವಿಷಜಂತುಗಳು ಕಂಡುಬಂದು ಆತಂಕ ಮೂಡಿಸಿದ್ದಿದೆ.

‘ಸಿಸಿ ಟಿವಿ ಕ್ಯಾಮೆರಾ ಅಳವಡಿಸಿಲ್ಲ. ಕಾಂಪೌಂಡ್ ಇಲ್ಲದ ಕಾರಣಕ್ಕೆ ಸೇಫ್ಟಿ ಗೇಟ್ ಕೂಡ ಇಲ್ಲ. ಇದುವರೆಗೂ ಕಾವಲುಗಾರ ಸಿಬ್ಬಂದಿಯನ್ನು ನೇಮಿಸಿಲ್ಲ. 300–400 ವಿದ್ಯಾರ್ಥಿನಿಯರು ಕಲಿಯುವ ಕಾಲೇಜಿನ ಬಗ್ಗೆ ಸಂಬಂಧಿಸಿದ ಇಲಾಖೆಯವರು ಮತ್ತು ಚುನಾಯಿತ ಜನಪ್ರತಿನಿಧಿಗಳು ಬೇಜವಾಬ್ದಾರಿ ವಹಿಸಿರುವುದು ಸರಿಯಲ್ಲ’ ಎಂದು ದಲಿತ ವಿದ್ಯಾರ್ಥಿ ಒಕ್ಕೂಟದ ಮುಖಂಡ ಮೌನೇಶ ಜಾಲವಾಡಗಿ ಹೇಳುತ್ತಾರೆ.

ಮೂಲಸೌಕರ್ಯ, ಉಪನ್ಯಾಸಕರ ಕೊರತೆ ಸೇರಿದಂತೆ ಹಲವು ವಿಷಯಗಳ ಕುರಿತು ಮೇಲಧಿಕಾರಿಗಳ ಗಮನ ಸೆಳೆಯಲಾಗಿದೆ. ವಿದ್ಯಾರ್ಥಿನಿಯರ ಸುರಕ್ಷತೆಯ ದೃಷ್ಟಿಯಿಂದ ಕಾಳಜಿ ವಹಿಸಲಾಗುವುದು
ಲಕ್ಷ್ಮಿದೇವಿ, ಪ್ರಾಚಾರ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.