
ರಾಯಚೂರು: ‘ಶಿವಾಜಿ ಭಾರತದ ಅಪ್ರತಿಮ ವೀರ ಸೇನಾನಿ, ಹಿಂದೂ ಧರ್ಮವನ್ನು ರಕ್ಷಣೆ ಮಾಡಿದ ಮಹಾನ್ ಹೋರಾಟಗಾರ, ಹಿಂದೂ ಧರ್ಮಕ್ಕೆ ಛತ್ರಪತಿ ಶಿವಾಜಿಯವರ ಕೊಡುಗೆ ಅಪಾರವಾಗಿದೆ’ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಬಣ್ಣಿಸಿದರು
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಹಾಲ್ನಲ್ಲಿ ಛತ್ರಪತಿ ಶಿವಾಜಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಶಿವಾಜಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಅವರು ಮಾತನಾಡಿದರು.
‘ಶಿವಾಜಿ ಧಾರ್ಮಿಕ ಸಹಿಷ್ಣುಹಿಯಾಗಿದ್ದರು ಅವರ ಆಡಳಿತ ಅವಧಿಯಲ್ಲಿ ಹಿಂದೂಗಳು ಮಾತ್ರವಲ್ಲ ಮುಸ್ಲಿಮರೂ ಕೂಡ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯವನ್ನು ಹೊಂದಿದ್ದರು. ಮಾನವತಾವಾದಿಯಾಗಿದ್ದ ಶಿವಾಜಿ ಮಹಿಳೆಯರಿಗೆ, ಮುಸ್ಲಿಂ ಸಮುದಾಯದ ಪವಿತ್ರ ಗ್ರಂಥವಾದ ಕುರಾನ್ಗೆ ವಿಶೇಷ ಗೌರವ ನೀಡುತ್ತಿದ್ದರು‘ ಎಂದು ತಿಳಿಸಿದರು.
‘ಶಿವಾಜಿ ಹೊಂದಿದ ಮಾನವೀಯತಾ ಮೌಲ್ಯಗಳು, ಸಾಂಸ್ಕೃತಿಕ ಹಿರಿಮೆಗಳು, ಹಿಂದೂ ಧರ್ಮದ ರಕ್ಷಣೆಯ ನೈತಿಕತೆಗಳು ಮತ್ತು ನಿಲುವು ಕೂಡ ಆದರ್ಶಪ್ರಾಯಾವಾಗಿವೆ’ ಎಂದು ಹೇಳಿದರು.
ಕುಲಸಚಿವ ಎ.ಚನ್ನಪ್ಪ ಕೆ.ಎ.ಎಸ್., ಡೀನ್ ಡಾ.ಲತಾ.ಎಂ.ಎಸ್., ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪಕುಲಸಚಿವ ಕೆ.ವೆಂಕಟೇಶ ಸ್ವಾಗತಿಸಿದರು.
ಮರಾಠಾ ಸಮುದಾಯದಿಂದ ಛತ್ರಪತಿ ಸ್ಮರಣೆ: ರಾಯಚೂರಿನ ಎಲ್.ಬಿ.ಎಸ್. ನಗರದಲ್ಲಿ ಇಂದು 399ನೇ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸಲಾಯಿತು.
ಮರಾಠಾ ಸಮುದಾಯದವರು ಎಲ್ಬಿಎಸ್ ನಗರದಿಂದ ಭವ್ಯ ಮೆರವಣಿಗೆ ಹೊರಟು ಘೋಷಣೆಗಳನ್ನು ಕೂಗುತ್ತ ಖಾಸ್ ಬಾವಿ ಹತ್ತಿರ ಇರುವ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದವರೆಗೆ ಬಂದರು.. ಅಲ್ಲಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಸಮಾಜದ ಪ್ರಮುಖರಾದ ಅಂಬಾಜಿ ರಾವು ಮೈದರ್ಕರ್, ರಘು ನನ್ನೋರೆ, ಆಂಬೊಜಿ ನನ್ನೋರೆ, ಬಸವರಾಜ್ ಭೋಸಲೆ, ಜಗದೀಶ ಭೋಸಲೆ, ಅಶೋಕ ನನ್ನೋರೆ, ಅಂಬೊಜಿ ಜಾಗತಾಪ್, ಫಿರೋಜಿ, ಮಹಿಳಾ ಘಟಕದ ಭಾಗ್ಯಶ್ರೀ ನನ್ನೋರೆ, ಪವಿತ್ರ ನನ್ನೋರೆ, ಪರಿಮಳ ನನ್ನೋರೆ, ಶಿಲ್ಪಾ ಗರುಡ ಪಾಲ್ಗೊಂಡಿದ್ದರು.
ಜಿಲ್ಲಾಡಳಿತದಿಂದ ಆಚರಣೆ
ರಾಯಚೂರು ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಮಹಾನಗರ ಪಾಲಿಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರಛತ್ರಪತಿ ಶಿವಾಜಿ ಜಯಂತಿ ಆಚರಿಸಲಾಯಿತು. ಮಾವಿನಕೆರೆ ಸಮೀಪದ ಶಿವಾಜಿ ವೃತ್ತದಲ್ಲಿ ಛತ್ರಪತಿ ಶಿವಾಜಿ ಭಾವಚಿತ್ರದ ಮೆರವಣಿಗೆಗೆ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಬೋಸರಾಜು ಚಾಲನೆ ನೀಡಿದರು. ಮೆರವಣಿಗೆಯು ಪೇಟ್ಲಾ ಬ್ರಿಜ್ ಭಗತ್ ಸಿಂಗ್ ವೃತ್ತ ಏಕ ಮೀನಾರ್ ಜಾಕೀರ್ ಹುಸೇನ್ ವೃತ್ತ ಜೈಲ್ ರಸ್ತೆ ಕೇಂದ್ರ ಬಸ್ ನಿಲ್ದಾಣ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ರಂಗ ಮಂದಿರಕ್ಕೆ ಬಂದಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಆರ್ಎಪಿಎಂಸಿ ಅಧ್ಯಕ್ಷ ಜಯಂತರಾವ್ ಪತಂಗೆ ದರೂರ ಬಸವರಾಜ ಪಾಟೀಲ ನರಸಪ್ಪ ಯಕ್ಷಾಸಪೂರ ಅಂಬಾಜಿ ರಾವ್ ಕಾಂಗ್ರೆಸ್ ಮುಖಂಡ ರವಿ ಬೋಸರಾಜ ಮಹಾನಗರಪಾಲಿಕೆ ಮಾಜಿ ಸದಸ್ಯ ಜಯಣ್ಣ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.