ರಾಯಚೂರು: ಯರಮರಸ್ ಸೂಪರ್ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ (ವೈಟಿಪಿಎಸ್) ಕಲ್ಲಿದ್ದಲು ವಿಭಾಗದಲ್ಲಿ ಭಾನುವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ್ದರಿಂದ ಕಲ್ಲಿದ್ದಲು ಸಾಗಿಸುವ ಬೆಲ್ಟ್ ಸಂಪೂರ್ಣ ಉರಿದುಹೋಗಿದೆ.
ದಾಸ್ತಾನು ಮಾಡಿದ ಕಲ್ಲಿದ್ದಲು ರಾಶಿಯೊಳಗೆ ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಬೆಂಕಿ ಕಾಣಿಸಿಕೊಳ್ಳುವುದು ಸಾಮಾನ್ಯ. ಬೆಂಕಿ ದಟ್ಟವಾದರೆ ಮಾತ್ರ ಬೆಲ್ಟ್ಗೆ ಕಲ್ಲಿದ್ದಲು ಸಾಗಿಸುವ ಪೂರ್ವದಲ್ಲಿ ಬೆಂಕಿ ನಂದಿಸುತ್ತಾರೆ. ಇದೀಗ ಬೆಂಕಿ ನಂದಿಸದೆ ಇರುವುದು ಈ ಅವಘಡಕ್ಕೆ ಕಾರಣವಾಗಿದೆ.
ಬೆಲ್ಟ್ ಸಂಪೂರ್ಣ ಸುಟ್ಟಿದ್ದು, ಕೆಲವು ಯಂತ್ರಗಳಿಗೂ ಹಾನಿಯಾಗಿದೆ. ಪರ್ಯಾಯ ಬೆಲ್ಟ್ ಮಾರ್ಗದಿಂದ ಕಲ್ಲಿದ್ದಲು ಸಾಗಣೆ ಆರಂಭವಾಗಿದೆ. ‘ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ಬೆಂಕಿ ಅವಘಡಗಳು ಸಾಮಾನ್ಯವಾಗಿ ನಡೆಯುತ್ತವೆ. ಮುಂಜಾಗ್ರತೆ ಬಿಗಿ ಮಾಡಬೇಕು’ ಎಂದು ವೈಟಿಪಿಎಸ್ ಅಧಿಕಾರಿಯೊಬ್ಬರು ತಿಳಿಸಿದರು;
ವೈಟಿಪಿಎಸ್ ಪೂರ್ಣಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಿದೆ. ಎರಡು ಘಟಕಗಳಿಂದ ಒಟ್ಟು ₹1,600 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.