
ಕವಿತಾಳ ಸಮೀಪದ ಇರಕಲ್ ಗ್ರಾಮದಲ್ಲಿ ಮೂರು ತಿಂಗಳಿಂದ ಪಡಿತರ ವಿತರಿಸಿಲ್ಲ ಎಂದು ಅಳಲು ತೋಡಿಕೊಂಡ ಗ್ರಾಮಸ್ಥರು
ಕವಿತಾಳ: ‘ಕಳೆದ ಮೂರು ತಿಂಗಳಿಂದ ಪಡಿತರ ವಿತರಣೆ ಮಾಡದ ಕಾರಣ ಪರದಾಡುವಂತಾಗಿದೆ’ ಎಂದು ಇರಕಲ್ ಗ್ರಾಮಸ್ಥರು ಆರೋಪಿಸಿದರು.
‘ಮಸ್ಕಿ ತಾಲ್ಲೂಕಿನ ವಟಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇರಕಲ್ ಗ್ರಾಮದ ಪಡಿತರ ಚೀಟಿ ಹೊಂದಿದ ಅಂದಾಜು 175 ಕುಟುಂಬಗಳಿಗೆ ಸಮೀಪದ ಬಸಾಪುರ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಆದರೆ ಮೂರು ತಿಂಗಳಿಂದ ಪಡಿತರ ವಿತರಿಸಿಲ್ಲ. ಈ ಬಗ್ಗೆ ಕೇಳಿದರೆ ಅಂಗಡಿ ವ್ಯವಸ್ಥಾಪಕ ನಾಳೆ ವಿತರಿಸುತ್ತೇವೆ, ಮುಂದಿನ ವಾರ ವಿತರಣೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ’ ಎಂದು ಫಲಾನುಭವಿಗಳು ದೂರಿದರು.
ಗ್ರಾಮಕ್ಕೆ ಬಂದು ಪಡಿತರ ವಿತರಣೆ ಮಾಡಲಾಗುತ್ತಿತ್ತು. ಈಗ ಮೂರು ತಿಂಗಳಿಂದ ಫಲಾನುಭವಿಗಳ ಹೆಬ್ಬೆರಳ ಗುರುತು ಪಡೆದು ಪ್ರತಿ ಕಾರ್ಡ್ದಾರರಿಂದ ₹ 20 ಪಡೆದು ಹೋಗಿದ್ದಾರೆ. ಆದರೆ ಪಡಿತರ ಮಾತ್ರ ವಿತರಿಸಿಲ್ಲ. ನಮ್ಮಲ್ಲಿ ನೀರಾವರಿ ಸೌಲಭ್ಯವಿಲ್ಲ. ಹೀಗಾಗಿ ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಲಿ ನಾಲಿ ಮಾಡಿಕೊಂಡು ಬದುಕು ಸಾಗಿಸುವ ಜನರು ಪಡಿತರದ ಮೇಲೆ ಅವಲಂಬಿತರಾಗಿದ್ದು ಉಪವಾಸ ಬೀಳುವಂತಾಗಿದೆ’ ಎಂದು ರೇಣುಕಮ್ಮ, ವಿಜಯಲಕ್ಷ್ಮಿ, ಪಾರ್ವತಮ್ಮ, ಅಯ್ಯಮ್ಮ, ನಿಂಗಮ್ಮ, ನರಸಮ್ಮ, ಯಂಕಮ್ಮ, ಹುಚ್ಚಮ್ಮ ಮತ್ತು ದುರುಗಮ್ಮ ಅಳಲು ತೋಡಿಕೊಂಡರು.
‘ಕೆಲವು ಕಾರ್ಡ್ದಾರರಿಗೆ ಐದು ತಿಂಗಳಿಂದ ಪಡಿತರ ವಿತರಿಸಿಲ್ಲ ನ್ಯಾಯಬೆಲೆ ಅಂಗಡಿ ವ್ಯವಸ್ಥಾಪ ಕರು ಮೊಬೈಲ್ ಕರೆ ಸ್ವೀಕರಿಸು ತ್ತಿಲ್ಲ. ಒಂದೊಮ್ಮೆ ಕರೆ ಸ್ವೀಕರಿಸಿದರೂ ಮುಂದಿನ ವಾರ ಕೊಡುವುದಾಗಿ ಹೇಳುತ್ತಾರೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಸ್ಪಂದಿಸುತ್ತಿಲ್ಲ’ ಎಂದು ಪರಶುರಾಮ, ರಾಘವೇಂದ್ರ, ಬಸವರಾಜ, ಹನುಮಂತ, ನಾಗರಾಜ, ರಮೇಶ, ದುರುಗಪ್ಪ, ನಾಗರಾಜ ಮತ್ತು ಮಲ್ಲಪ್ಪ ಮತ್ತಿತರರು ಹೇಳಿದರು.
ಬಸಾಪುರ ವ್ಯಾಪ್ತಿಯ ಬೇರೆ ಗ್ರಾಮಗಳಲ್ಲಿ ವಿತರಿಸಿದ್ದರೂ ಇರಕಲ್ ಗ್ರಾಮದಲ್ಲಿ ವಿತರಿಸು ತ್ತಿಲ್ಲ. ಹೀಗಾಗಿ ಸ್ಥಳೀಯರಿಗೆ ಅಂಗಡಿ ವಹಿಸಿ ನಿಯಮಿತವಾಗಿ ವಿತರಣೆಗೆ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಪ್ರತಿಭಟನೆ ನಡೆಸಲಾಗುವುದು ಎಂದು ಫಲಾನುಭವಿಗಳು ಎಚ್ಚರಿಸಿದರು.
ಈ ಬಗ್ಗೆ ತಮಗೆ ಮಾಹಿತಿ ಇಲ್ಲ. ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆ ಸರಿಪಡಿಸುವಂತೆ ಮಾನ್ವಿಯ ಆಹಾರ ಇಲಾಖೆ ಅಧಿಕಾರಿಗೆ ಸೂಚಿಸಲಾಗಿದೆಮಂಜುನಾಥ ಭೋಗಾವತಿ ತಹಶೀಲ್ದಾರ್, ಮಸ್ಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.