ADVERTISEMENT

ಸಿಂಧನೂರು: ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 12:43 IST
Last Updated 20 ನವೆಂಬರ್ 2021, 12:43 IST
ಸಿಂಧನೂರಿನ ಮಿನಿವಿಧಾನಸೌಧ ಮುಂದೆ ಮಾದಿಗ ದಂಡೋರ ತಾಲ್ಲೂಕು ಘಟಕದ ಪ್ರಮುಖರು ಶಿರಸ್ತೇದಾರ್ ಅಂಬಾದಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಸಿಂಧನೂರಿನ ಮಿನಿವಿಧಾನಸೌಧ ಮುಂದೆ ಮಾದಿಗ ದಂಡೋರ ತಾಲ್ಲೂಕು ಘಟಕದ ಪ್ರಮುಖರು ಶಿರಸ್ತೇದಾರ್ ಅಂಬಾದಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಸಿಂಧನೂರು: ಲಿಂಗಸುಗೂರು ತಾಲ್ಲೂಕಿನ ಕಿಲ್ಲಾರಟ್ಟಿ ಗ್ರಾಮದಲ್ಲಿ ಮಾದಿಗ ಸಮಾಜದ ಬೈಲಪ್ಪ ಅವರ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಮಾದಿಗ ದಂಡೋರ ತಾಲ್ಲೂಕು ಘಟಕ ಶನಿವಾರ ಸ್ಥಳೀಯ ಮಿನಿವಿಧಾನಸೌಧ ಮುಂದೆ ಪ್ರತಿಭಟಿಸಿತು.

ಕಿಲ್ಲಾರಟ್ಟಿ ಗ್ರಾಮದಲ್ಲಿ ಮಾದಿಗ ಸಮಾಜದ ಬೈಲಪ್ಪರ ಪುತ್ರಿ ಅಪ್ರಾಪ್ತ ಬಾಲಕಿಯನ್ನು ಒಂದು ವರ್ಷದ ಹಿಂದೆ ಮೇಲ್ಜಾತಿಯ ಯುವಕ ಲಚುಮಪ್ಪ ಅಪಹರಿಸಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಬೈಲಪ್ಪನನ್ನು ವಿಚಾರಿಸುತ್ತಿರುವಾಗ ಮೇಲ್ಜಾತಿಯ ದುರುಗನಗೌಡ ಮತ್ತು ಸುರೇಶ ಸಹೋದರರು ಜಾತಿ ನಿಂದನೆ ಮಾಡಿ, ಅರೆಬೆತ್ತಲೆಗೊಳಿಸಿ, ಮಾರಣಾಂತಿಕ ಹಲ್ಲೆವೆಸಗಿ ದೌರ್ಜನ್ಯ ಮಾಡಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಈ ಘಟನೆಗೆ ಪೊಲೀಸರ ಬೇಜವಾಬ್ದಾರಿಯು ಕಾರಣವಾಗಿದೆ ಎಂದು ಮಾದಿಗ ದಂಡೋರ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಬುಕ್ಕನಹಟ್ಟಿ ದೂರಿದರು.

ಬೈಲಪ್ಪ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಅಪ್ರಾಪ್ತ ಬಾಲಕಿಯ ಅಪಹರಣ ಮಾಡಿ ಒಂದು ವರ್ಷವಾದರೂ ಆರೋಪಿಗಳನ್ನು ಬಂಧಿಸದೆ ನಿರ್ಲಕ್ಷ್ಯ ವಹಿಸಿರುವ ಮುದಗಲ್ ಸಬ್‍ಇನ್ಸ್‍ಪೆಕ್ಟರ್ ಡಾಕೇಶ್ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು. ಹಲ್ಲೆಗೊಳಗಾದ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಶಿರಸ್ತೇದಾರ್ ಅಂಬಾದಾಸ್ ಮನವಿ ಪತ್ರ ಸ್ವೀಕರಿಸಿದರು. ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜ ಕಂದಗಲ್, ತಾಲ್ಲೂಕು ಘಟಕ ಕಾರ್ಯಾಧ್ಯಕ್ಷ ಚಿಕ್ಕೋರಪ್ಪ ತುರ್ವಿಹಾಳ, ಮುಖಂಡರಾದ ನಾಗರಾಜ ಹೆಡಗಿನಾಳ, ಹನುಮಂತಪ್ಪ ಹಂಪನಾಳ, ಮಲ್ಲಿಕಾರ್ಜುನ ಹತ್ತಿಗುಡ್ಡ, ಅಯ್ಯಪ್ಪ ಪಗಡದಿನ್ನಿ, ಹನುಮೇಶ ಧುಮತಿ, ಹಲ್ಲೇಶ ವಿರುಪಾಪುರ, ಸತ್ಯಪ್ಪ ತುರ್ವಿಹಾಳ, ಕಾಡಪ್ಪ ಬೇರಿಗಿ, ಕೊಟೇಶ ಸೂಲಂಗಿ, ಮುತ್ತುಸಾಗರ, ಪೂಜಪ್ಪ, ಹನುಮಂತ ಗೋನವಾರ, ಮಲ್ಲಿಕಾರ್ಜುನ ದೀನಸಮುದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.