ಲಿಂಗಸುಗೂರು: ಏಕಾಏಕಿ ನದಿಗೆ ನೀರು ಬಿಟ್ಟಿದ್ದರಿಂದ ತಾಲ್ಲೂಕಿನ ಕೊತಿಂಬಳೆರ ದೊಡ್ಡಿ ಬಳಿಯ ಕೃಷ್ಣಾ ನದಿ ನಡುಗಡ್ಡೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಕುರಿಗಾಯಿ ಹಾಗೂ 30 ಕುರಿಗಳನ್ನು ಎನ್ಡಿಆರ್ಎಫ್ ತಂಡ ರಕ್ಷಿಸಿದೆ.
ಕುರಿಗಾಹಿ ಬಸಪ್ಪ ಅಮರಪ್ಪ ರಾಮಲೂಟಿ ಗುರುವಾರ ಕುರಿ ಮೇಯಿಸಲು ಕೊತಿಂಬಳೆರ ದೊಡ್ಡಿ ಬಳಿಯ ಕೃಷ್ಣಾ ನದಿ ನಡುಗಡ್ಡೆ ಪ್ರದೇಶಕ್ಕೆ ತೆರಳಿದ್ದರು. ಮಧ್ಯಾಹ್ನದ ವೇಳೆಗೆ ನಾರಾಯಣಪುರ ಅಣೆಕಟ್ಟೆಯಿಂದ ನದಿಗೆ ನೀರು ಬಿಡಲಾಯಿತು. ಆಗ ನದಿ ದಾಟಲು ಆಗದೆ ನಡುಗಡ್ಡೆಯಲ್ಲಿ ಸಿಕ್ಕಿ ಹಾಕಿಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ತಹಶೀಲ್ದಾರ್ ಚಾಮರಾಜ ಪಾಟೀಲ ನೇತೃತ್ವದಲ್ಲಿ ಎನ್ಡಿಆರ್ಎಫ್ ಮತ್ತು ಅಗ್ನಿ ಶಾಮಕ ಸಿಬ್ಬಂದಿ ಬೋಟ್ ಸಮೇತ ಶುಕ್ರವಾರ ನಡುಗಡ್ಡೆಗೆ ತೆರಳಿ ಮೂರು ಹಂತದಲ್ಲಿ ಕುರಿಗಾಯಿ ಬಸಪ್ಪ ಮತ್ತು 30 ಕುರಿಗಳನ್ನು ಸುರಕ್ಷಿತವಾಗಿ ಕರೆತಂದರು. ಇದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಹಶೀಲ್ದಾರ್ ಚಾಮರಾಜ ಪಾಟೀಲ ಮಾತನಾಡಿ, ‘ಮಳೆಗಾಲ ಮುಗಿಯುವವರೆಗೆ ಕೃಷ್ಣಾ ನದಿ ಪಾತ್ರದ ಗ್ರಾಮಸ್ಥರು ನದಿ ತಟ ಅಥವಾ ನದಿಗಳಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದೇವೆ. ಸಾಧ್ಯವಾದಷ್ಟು ಎತ್ತರದ ಪ್ರದೇಶಗಳಿಗೆ ತೆರಳಬೇಕು. ಹುಚ್ಚು ಸಾಹಸಕ್ಕೆ ಹೋಗುವುದರಿಂದ ಜೀವಕ್ಕೆ ಅಪಾಯ ತಂದುಕೊಳ್ಳುತ್ತೀರಿ’ ಎಂದು ಸಲಹೆ ಹೇಳಿದರು.
ಕಂದಾಯ ನಿರೀಕ್ಷಕ ರಾಘವೇಂದ್ರ ಸೇರಿದಂತೆ ಕಂದಾಯ ಇಲಾಖೆ ನೌಕರರು, ಸುತ್ತಮುತ್ತಲ ಗ್ರಾಮ ಹಾಗೂ ದೊಡ್ಡಿ ಜನ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.