ಶಕ್ತಿನಗರ: ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಸೋಮವಾರ ಕೊರವಿಹಾಳ ಗ್ರಾಮದಲ್ಲಿ ಎತ್ತಿನ ಬಂಡಿಯಲ್ಲಿ ಶಾಲಾ ಮಕ್ಕಳನ್ನು ಶಾಲೆಗೆ ಕರೆತರಲಾಯಿತು. ಸರಸ್ವತಿ ಭಾವಚಿತ್ರ ಇರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಡೊಳ್ಳು ಕುಣಿತ ಮತ್ತು ವಾದ್ಯ ಮೇಳದೊಂದಿಗೆ ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸಲಾಯಿತು.
ಶಕ್ತಿನಗರದ ಕರ್ನಾಟಕ ವಿದ್ಯುತ್ ನಿಗಮದ ದಯಾನಂದ ಆಂಗ್ಲಿ ವೇದಿಕೆ ಶಾಲೆಯಲ್ಲಿ (ಡಿಎವಿ ಪಬ್ಲಿಕ್ ಸ್ಕೂಲ್) ಮಕ್ಕಳಿಗೆ ಸಿಹಿ ನೀಡಲಾಯಿತು. ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ತಳಿರು ತೋರಣ, ವರ್ಣರಂಜಿತ ಬಲೂನು, ರಂಗೋಲಿ ಹಾಕಿ ಶಾಲಾ ಆವರಣ ಸಜ್ಜುಗೊಳಿಸಿದ್ದರು. ವಿದ್ಯಾರ್ಥಿಗಳಿಗೆ ಹೂವಿನ ಸಿಂಚನ ಮಾಡುವುದರ ಜೊತೆಗೆ ಸಿಹಿ ವಿತರಿಸಲಾಯಿತು.
ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ ಅವರು ತರಗತಿಗಳ ಆರಂಭಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷ ಅಮರೇಶ್, ಸದಸ್ಯರಾದ ಸವಿತಾ ಮುರುಳೀಕೃಷ್ಣ, ಲಿಂಗಪ್ಪ ಇದ್ದರು. ಪ್ರಾಚಾರ್ಯ ವಿ.ಕೆ.ಅಂಗಡಿ ಸ್ವಾಗತಿಸಿದರು.
ಯರಮರಸ ಗ್ರಾಮದ ಆದರ್ಶ ವಿದ್ಯಾಲಯ ಶಾಲೆಯನ್ನು ಸಹ ತಳಿರು ತೊರಣ, ಹೂಗಳಿಂದ ಅಲಂಕಾರ ಮಾಡಲಾಯಿತು. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ತಾಯಣ್ಣ ಕಲಮಲ ಅವರು ಮಕ್ಕಳಿಗೆ ಹೂ ನೀಡಿ ಸ್ವಾಗತಿಸಿದರು. ಸದಸ್ಯರಾದ ಹನುಮೇಶ ದಂಡು, ಅಶೋಕ ಕಾಮತ್, ಉಮಾದೇವಿ, ಸಲಿಂ ಶರಣಬಸವ, ಮಖ್ಯಶಿಕ್ಷಕಿ ನಿರ್ಮಲಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.