
ಪ್ರಜಾವಾಣಿ ವಾರ್ತೆ
ರಾಯಚೂರು: ರಾಷ್ಟೀಯ ಜೀವನೋಪಾಯ ಅಭಿಯಾನವು ಡೇ-ನಲ್ಮ್ ಅಭಿಯಾನದಡಿ ಪ್ರಕಟಿಸಿದ ಕೌಶಲ ಕರ್ನಾಟಕ ಪ್ರಶಸ್ತಿಗೆ ರಾಯಚೂರು ಮಹಾನಗರಪಾಲಿಕೆಯು ಆಯ್ಕೆಯಾಗಿದೆ.
ಸ್ವಸಹಾಯ ಗುಂಪುಗಳ ಪರವಾಗಿ ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ ಅವರಿಗೆ ರಾಷ್ಟೀಯ ಜೀವನೋಪಾಯ ಅಭಿಯಾನದ ನಿರ್ದೇಶಕರು ಅಭಿನಂದನೆ ಪತ್ರ ಕಳಿಸಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಅತ್ಯುತ್ತಮ ಸಾಧನೆ ಮಾಡಿದ ಸ್ವ-ಸಹಾಯ ಗುಂಪುಗಳ ಪ್ರಸ್ತಾವನೆ ಪರಿಶೀಲಿಸಲಾಗಿ, ನಿಗದಿತ ಅರ್ಹ ಮಾನದಂಡಗಳನ್ವಯ ಪ್ರಕಟಿಸಿದ ಪಟ್ಟಿಯಲ್ಲಿ ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅಕ್ಕಮಹಾದೇವಿ ಸ್ವಸಹಾಯ ಸಂಘಕ್ಕೆ ಇಡೀ ರಾಜ್ಯದಲ್ಲೇ ಮೂರನೇ ಸ್ಥಾನ ಲಭಿಸಿದೆ. ಮೊದಲ ಸ್ಥಾನವನ್ನು ಶಿವಮೊಗ್ಗ ಜಿಲ್ಲೆ ಪಡೆದುಕೊಂಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಎರಡನೇ ಸ್ಥಾನ ಲಭಿಸಿದೆ.
ಅಕ್ಕಮಹಾದೇವಿ ಸ್ವಸಹಾಯ ಸಂಘದ ಚಟುವಟಿಕೆಗಳು ಇನ್ನೀತರ ಸ್ವಸಹಾಯ ಸಂಘಗಳಿಗೆ ಸ್ಫೂರ್ತಿಯಾಗಲಿ ಎಂದು ಆಯುಕ್ತ ಜುಬಿನ್ ಮೊಹಾಪಾತ್ರ ಪ್ರತಿಕ್ರಿಯಿಸಿದ್ದಾರೆ.