ಮಸ್ಕಿ : ಪರಿಶಿಷ್ಟ ಜನಾಂಗಕ್ಕೆ ಶೇ 7.5 ಮೀಸಲಾತಿ ಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ. ಕೆಲವೊಂದು ಕಾನೂನು ತೊಡಕುಗಳ ಕಾರಣ ವಿಳಂಬವಾಗಿದೆ. ಸ್ವಾಮೀಜಿ ಅವರು ಮುಷ್ಕರ ನಿಲ್ಲಿಸಿ ಸಹಕಾರ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಕರೆ ನೀಡಿದರು.
ಶುಕ್ರವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ‘ಎಸ್ಟಿ ಸಮಾಜಕ್ಕೆ ಶೇ 7.5 ಮೀಸಲಾತಿ ಕೊಡಿಸುವುದಾಗಿ ರಕ್ತದಲ್ಲಿ ಬರೆದು ಕೊಡುವುದಾಗಿ ಹೇಳಿದ್ದೆ. ರಕ್ತ ಅಲ್ಲ ಅದಕ್ಕೆ ಜೀವ ಬೇಕಾದರೂ ಕೊಡುತ್ತೇನೆ. ಆದರೆ, ಕಾಂಗ್ರೆಸ್ನವರಿಗೆ ತಾಳ್ಮೆ ಇಲ್ಲ. ಮೀಸಲಾತಿ ಕೊಟ್ಟ ಮೇಲೆ ಮುಂದೆ ಯಾವುದೇ ಕಾನೂನು ತೊಡಕು ಬರಬಾರದು ಎಂಬ ಉದೇಶದಿಂದ ಎಲ್ಲಾ ತೊಡಕುಗಳನ್ನು ನಿವಾರಿಸಿ ಈಗ ಕೊನೆಯ ಹಂತಕ್ಕೆ ಬಂದಿದ್ದೇವೆ’ ಎಂದರು.
ನಮ್ಮ ಸರ್ಕಾರ ಇನ್ನೂ ಒಂದು ವರ್ಷ ಅಧಿಕಾರದ ಲ್ಲಿರುತ್ತದೆ. ಅಷ್ಟರೊಳಗೆ ನಾವು ಮಾತು ಕೊಟ್ಟಂತೆ ಮೀಸಲಾತಿ ನೀಡುತ್ತೇವೆ ಎಂದರು.
ಎಸ್ಟಿ ಸೇರಿದಂತೆ ಎಲ್ಲಾ ಹಿಂದುಳಿದ ಜನಾಂಗಕ್ಕೆ ಏನಾದರೂ ನ್ಯಾಯ ಸಿಕ್ಕಿದ್ದರೆ ಅದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಮಾತ್ರ, ಕಾಂಗ್ರೆಸ್ನವರು ಅಧಿಕಾರದಲ್ಲಿ ಇದ್ದಾಗ ಈ ಜನಾಂಗಕ್ಕೆ ಏನೂ ಮಾಡದೆ ಈಗ ಬೊಬ್ಬೆ ಹೊಡೆಯುತ್ತಿದ್ದಾರೆ ಎಂದರು.
ಸ್ವಾಮೀಜಿ ಧರಣಿ ಕುಳಿತು 100 ದಿನಗಳಗಾಗಿದೆ. ಮಸ್ಕಿಯಲ್ಲಿ ನಡೆದ ಮೀಸಲಾತಿ ಪ್ರತಿಭಟನೆಯಲ್ಲಿ ಶೇಖರಗೌಡ ಕಾಟಗಲ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಂತಹ ಅವಘಡ ಮುಂದೆ ಆಗುವುದು ಬೇಡ ಎಂದು ಮನವಿ ಮಾಡಿದರು.
ಜೂ.3ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡುವಂತೆ ಬಿಜೆಪಿ ಕೋರ್ ಕಮಿಟಿಯಿಂದ ಮಾಜಿ ಶಾಸಕ ಪ್ರತಾಪಗೌಡ ಅವರ ಹೆಸರು ಹೈಕಮಾಂಡ್ಗೆ ಶಿಫಾರಸು ಮಾಡಿದೆ ಎಂದು ಬಿ.ಶ್ರೀರಾಮುಲು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರತಾಪಗೌಡ ಪಾಟೀಲ ಅವರ ತ್ಯಾಗವನ್ನು ಪಕ್ಷ ಮರೆಯುವುದಿಲ್ಲ. ಬರುವ ದಿನಗಳಲ್ಲಿ ಅವರಿಗೆ ಉನ್ನತ ಸ್ಥಾನ ದೊರೆಯಲಿದೆ ಎಂದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಶರಣಯ್ಯ ಸೊಪ್ಪಿಮಠ, ಪ್ರಸನ್ನ ಪಾಟೀಲ, ಅರ್.ಕೆ. ನಾಯಕ ಈ ಸಂದರ್ಭದಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.