ರಾಯಚೂರು: ತಾಲ್ಲೂಕಿನ ಯರಮರಸ್ನಲ್ಲಿ ಜಿಲ್ಲಾ ಕೊಕ್ಕೊ ಅಸೋಸಿಯೇಷನ್ ಹಾಗೂ ಆದಿಬಸವೇಶ್ವರ ಸ್ಪೋಟ್ಸ್ ಕ್ಲಬ್ನಿಂದ ಹೊನಲು ಬೆಳಕಿನ ರಾಜ್ಯಮಟ್ಟದ ಕೊಕ್ಕೊ ಪಂದ್ಯಾವಳಿ ಫೆಬ್ರುವರಿ 7ರಿಂದ 9ವರೆಗೆ ಆದಿಬಸವೇಶ್ವರ ದೇವಸ್ಥಾನದ ಹತ್ತಿರದ ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ವೈ.ಸುರೇಂದ್ರಬಾಬು ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 20 ತಂಡಗಳು ನೋಂದಣಿ ಮಾಡಿಕೊಂಡಿವೆ. ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿರುವ 300 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದರು.
ಪಂದ್ಯಾವಳಿಯಲ್ಲಿ 17 ನಿರ್ಣಾಯಕರು ಇರಲಿದ್ದಾರೆ. ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾದ ಪಂದ್ಯಾವಳಿಗಳು ನಡೆಯಲಿವೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
7ರಂದು ಸಂಜೆ ಪಂದ್ಯಾವಳಿಯನ್ನು ಶಾಸಕ ಡಾ.ಶಿವರಾಜ ಪಾಟೀಲ್ ಉದ್ಘಾಟಿಸುವರು. ರಾಜಕಾರಣಿಗಳು ಮತ್ತು ಅಧಿಕಾರಿಗಳು ಅತಿಥಿಗಳಾಗಿ ಭಾಗವಹಿಸುವರು. ಸಾರ್ವಜನರು ಪಂದ್ಯಾವಳಿಯನ್ನು ವೀಕ್ಷಣೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಪಯೋನಿಯರ್ಸ್, ಮಂಗಳೂರಿನ ಆಳ್ವಾಸ್, ದಾವಣಗೆರೆ, ಶಿವಮೊಗ್ಗ, ಹಾಸನ, ಚಳ್ಳಿಕೆರೆ, ಮಂಡ್ಯ, ಮೈಸೂರು ಹಾಗೂ ರಾಯಚೂರು ಎಬಿಎಸ್ಸಿ ಯರಮರಸ್ ತಂಡದ ಪುರುಷ ಮತ್ತು ಮಹಿಳೆಯರ ತಂಡಗಳು ಪ್ರತ್ಯೇಕವಾಗಿ ಪಂದ್ಯಾವಳಿ ನಡೆಯಲಿವೆ ಎಂದು ಹೇಳಿದರು.
ಪ್ರಥಮದಿಂದ ಹಿಡಿದು ಚತುರ್ಥ ಸ್ಥಾನ ಪಡೆದವರಿಗೆ ಅನುಕ್ರಮವಾಗಿ ₹20ಸಾವಿರ, ₹15 ಸಾವಿರ, ₹10 ಸಾವಿರ ಮತ್ತು ₹5 ಸಾವಿರ ನಗದು ಬಹುಮಾನ ಜೊತೆಗೆ ನೆನಪಿನ ಕಾಣಿಕೆ ನೀಡಲಾಗುತ್ತದೆ ಎಂದು ತಿಳಿಸಿದರು.
ನಗರಸಭೆ ಸದಸ್ಯ ಸಣ್ಣ ನರಸರೆಡ್ಡಿ, ಮಾಜಿ ಸದಸ್ಯರಾದ ಈರಪ್ಪಗೌಡ, ಶಂಶಾಲಂ, ಯು.ಗೋವಿಂದರೆಡ್ಡಿ, ಆಂಜನೇಯ, ನರಸಿಂಹಲು, ಗಿರಿಸಾಗರ, ಶಿವಕುಮಾರ ಪೊಲೀಸ್ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.