ಮಸ್ಕಿ: ಪಟ್ಟಣದ ಬಸವೇಶ್ವರ ನಗರದಲ್ಲಿನ ಬಲಮೂರಿ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಗುರುವಾರ ರಾತ್ರಿ ಕಳ್ಳತನ ಯತ್ನ ನಡೆದಿದೆ. ರಾತ್ರಿ 12 ರ ಸಮಯದಲ್ಲಿ ಈ ಘಟನೆ ನಡೆದಿದೆ. ಬಾಗಿಲಿನ ಚಿಲಕ ಮುರಿದ ಕಳ್ಳರು ಕಾಣಿಕೆ ಪಟ್ಟಿಗೆ ಎತ್ತಿಕೊಂಡು ದೇವಸ್ಥಾನದ ಕಂಪೌಂಡ್ ಜಿಗಿದು ಪರಾರಿಯಾಗಿದ್ದಾರೆ.
ಶಬ್ದ ಕೇಳಿ ಹೊರಬಂದ ದೇವಸ್ಥಾನದ ಪಕ್ಕದ ಮನೆಯ ಅಮರೇಶ ಎಂಬುವವರು ಕಳ್ಳರನ್ನು ಹಿಡಿಯುವ ಯತ್ನ ನಡೆಸಿದ್ದಾರೆ. ಕಳ್ಳರು ಅವನ ಮೇಲೆ ಕಲ್ಲು ತೂರಿ ಕಾಣಿಗೆ ಪೆಟ್ಟಿಗೆಯನ್ನು ಪಕ್ಕದ ರಸ್ತೆಯ ಮೇಲೆ ಎಸೆದು ಲೇಔಟ್ ಒಂದರಲ್ಲಿ ಓಡಿ ಹೋಗಿದ್ದಾರೆ.
ಸುದ್ದಿ ತಿಳಿಯುತ್ತಲೇ ದೇವಸ್ಥಾನ ಟ್ರಸ್ಟ್ನ ಅಧ್ಯಕ್ಷ ಪ್ರಕಾಶ ಮಸ್ಕಿ ಸ್ಥಳೀಯ ಪೋಲಿಸರಿಗೆ ಮಾಹಿತಿ ಮಾಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಸಬ್ ಇನ್ಸ್ಪೆಕ್ಟರ್ (ಕ್ರೈಂ) ಭೀಮದಾಸ ಮತ್ತು ಪೊಲೀಸರು ಕಳ್ಳರಿಗಾಗಿ ರಾತ್ರಿ ಒಂದು ಗಂಟೆವರೆಗೆ ಹುಡುಕಾಟ ನಡೆಸಿದರೂ ಅವರು ಪತ್ತೆಯಾಗಲಿಲ್ಲ. 20 ರಿಂದ 22 ವರ್ಷದ ಇಬ್ಬರು ಹುಡುಗರು ಇದ್ದರು ಎಂದು ಕಳ್ಳರನ್ನು ಹಿಡಿಯುವ ಯತ್ನ ಮಾಡಿದ ಅಮರೇಶ ತಿಳಿಸಿದ್ದಾರೆ. ಘಟನೆ ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ಬಾಚಂದ್ರ ಡಿ. ಲಕ್ಕಂ ಭೇಟಿ ನೀಡಿದ್ದು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.