ADVERTISEMENT

ದೇವದುರ್ಗ |ಅಂಗನವಾಡಿ ಬೀಗ ಮುರಿದು ಕಳ್ಳತನಕ್ಕೆ ಯತ್ನ

ಪೊಲೀಸ್ ಠಾಣೆಗೆ ದೂರು ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 16:04 IST
Last Updated 26 ಮಾರ್ಚ್ 2024, 16:04 IST
ದೇವದುರ್ಗ ಪಟ್ಟಣದ ಪಾಟೀಲ ಓಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿನ ಅಂಗನವಾಡಿ ಕೇಂದ್ರದ ಬೀಗ ಮುರಿದಿರುವುದು
ದೇವದುರ್ಗ ಪಟ್ಟಣದ ಪಾಟೀಲ ಓಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿನ ಅಂಗನವಾಡಿ ಕೇಂದ್ರದ ಬೀಗ ಮುರಿದಿರುವುದು   

ದೇವದುರ್ಗ: ಪಟ್ಟಣದ ಪಾಟೀಲ ಓಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿನ ಅಂಗನವಾಡಿ ಕೇಂದ್ರದ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

ಅಂಗನವಾಡಿ ಕೇಂದ್ರದ ಬಾಗಿಲು ಮುರಿಯುವ ಶಬ್ದಕ್ಕೆ ನಿವಾಸಿಗರು ಓಡಿ ಬಂದಾಗ ಕುಡಿದು ಮತ್ತಿನಲ್ಲಿದ್ದ ಕಿಡಿಗೇಡಿಗಳ ಯುವಕರ ತಂಡ ಥಳಿಸುತ್ತಾರೆ ಎಂದು ಕಾಲ್ಕಿತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ, ಸರ್ಕಾರಿ ಉರ್ದು ಶಾಲೆಯ ಮುಖ್ಯಶಿಕ್ಷಕ ಹಾಗೂ ಇಬ್ಬರು ಅಂಗನವಾಡಿ ಶಿಕ್ಷಕರು ಇಲಾಖೆಗೆ ಮಾಹಿತಿ ನೀಡಿ ಮಂಗಳವಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

‘ಪಟ್ಟಣದ ಕೆಲ ಪುಂಡ ಪೋಕರಿಗಳು ಪ್ರತಿದಿನ ಶಾಲಾ ಆವರಣದಲ್ಲಿ ಮದ್ಯ ಸೇವಿಸುತ್ತಾರೆ. ಬಾಟಲಿಗಳನ್ನು ಶಾಲೆಯ ಬಾಗಿಲುಗಳಿಗೆ ಹೊಡೆದು ಹೋಗುತ್ತಾರೆ. ಶಾಲೆಯ ಮುಖ್ಯ ಗೇಟ್‌ಗೆ ಬೀಗ ಹಾಕಿದರೂ ಹಲವು ಬಾರಿ ಮುರಿದು ಹಾಕಿದ್ದಾರೆ. ಶಾಲೆಗೆ ಬರುವ ಮಕ್ಕಳು ಪ್ರತಿದಿನ ಪ್ರಾರ್ಥನೆಗೂ ಮುನ್ನ ಮದ್ಯದ ಬಾಟಲಿ ಗಾಜಿನ ಚೂರುಗಳು, ಮದ್ಯದ ಪೌಚ್, ಗುಟ್ಕಾ ಪಾನ್ ಮಸಾಲ ತಿಂದು ಉಗುಳಿದ ಗಲೀಜನ್ನು ಶಿಕ್ಷಕರೊಂದಿಗೆ ಸ್ವಚ್ಛಗೊಳಿಸಬೇಕಾಗಿದೆ’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ಶಾಲೆಯ ನೆರೆಹೊರೆಯ ಮನೆಗೆ ಮದ್ಯದ ಬಾಟಲುಗಳನ್ನು ಎಸೆಯಲಾಗುತ್ತಿದೆ. ರಾತ್ರಿ ಬೀಟ್ ಪೊಲೀರಿಗೆ ಮಾಹಿತಿ ಇದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕಿಡಿಗೆಡಿಳನ್ನು ಬಂಧಿಸಬೇಕು’ ಎಂದು ಪಾಲಕ ಸುನೀಲ್ ಕುಮಾರ ಮಡಿವಾಳ ಒತ್ತಾಯಿಸಿದರು.

ಈ ಶಾಲೆಯ ಆವರಣದಲ್ಲಿ ಸರ್ಕಾರಿ ಉರ್ದು ಶಾಲೆ, 2 ಅಂಗನವಾಡಿ ಕೇಂದ್ರಗಳು ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. 450ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಸುತ್ತಲೂ ತಡೆಗೋಡೆಯಿದ್ದರೂ ಅದನ್ನು ಹಲವೆಡೆ ಒಡೆಯಲಾಗಿದೆ.

ಶಾಲೆಯ ಹಿಂಭಾಗದಲ್ಲಿ ತಡೆಗೋಡೆ ನಿರ್ಮಿಸಿ ಶಾಲಾ ಅವಧಿಯ ನಂತರ ಮುಖ್ಯ ಗೇಟ್ ಬೇಗ ಹಾಕಲು ಇಲಾಖೆ ಕ್ರಮ ಕೈಗೊಳ್ಳಬೇಕು.
ಮಂಜುನಾಥ ರೆಡ್ಡಿ ತಾಲ್ಲೂಕು ಘಟಕ ಅಧ್ಯಕ್ಷ ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.