ADVERTISEMENT

ಸಿಂಧನೂರು | ‘ತುಂಗಭದ್ರಾ ರಕ್ಷಣೆ ನಮ್ಮೆಲ್ಲರ ಹೊಣೆ’

ಸುದ್ದಿಗೋಷ್ಠಿಯಲ್ಲಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 6:47 IST
Last Updated 6 ಡಿಸೆಂಬರ್ 2025, 6:47 IST
‘ತುಂಗಭದ್ರಾ ಜಲಾಶಯ ರಕ್ಷಣೆ ನಮ್ಮೆಲ್ಲರ ಹೊಣೆ’ ಸಮಾವೇಶದ ಪೋಸ್ಟ್‌ರನ್ನು ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ ಬಿಡುಗಡೆಗೊಳಿಸಿದರು 
‘ತುಂಗಭದ್ರಾ ಜಲಾಶಯ ರಕ್ಷಣೆ ನಮ್ಮೆಲ್ಲರ ಹೊಣೆ’ ಸಮಾವೇಶದ ಪೋಸ್ಟ್‌ರನ್ನು ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ ಬಿಡುಗಡೆಗೊಳಿಸಿದರು    

ಸಿಂಧನೂರು: ‘ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಜೈ ಜವಾನ್ ಜೈ ಕಿಸಾನ್ ಜನಸೇವಾ ಸಂಘದ ತಾಲ್ಲೂಕು ಘಟಕದ ನೇತೃತ್ವದಲ್ಲಿ ವಿಶ್ವ ರೈತರ ದಿನಾಚರಣೆ ಅಂಗವಾಗಿ ‘ತುಂಗಭದ್ರಾ ಜಲಾಶಯ ರಕ್ಷಣೆ ನಮ್ಮೆಲ್ಲರ ಹೊಣೆ’ ಸಮಾವೇಶ ಡಿ.23 ರಂದು ಸಿಂಧನೂರಿನ ಎಪಿಎಂಸಿ ಮೊದಲ ಗೇಟ್‍ನಲ್ಲಿರುವ ಟೆಂಡರ್ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ರೈತ ಸಂಘದ ರಾಜ್ಯ  ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ತುಂಗಭದ್ರಾ ಜಲಾಶಯವು ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಜೀವನಾಡಿಯಾಗಿದ್ದು, ಇದನ್ನು ನಂಬಿಯೇ ಲಕ್ಷಾಂತರ ರೈತರು ಬದುಕುತ್ತಿದ್ದಾರೆ. ಪ್ರಸ್ತುತ ಡ್ಯಾಂ ಸುತ್ತಲಿರುವ 200ಕ್ಕೂ ಅಧಿಕ ಕಾರ್ಖಾನೆಗಳು ವಿಷಪೂರಿತ ನೀರು, ತ್ಯಾಜ್ಯವನ್ನು ನದಿಗೆ ಬಿಡುತ್ತಿರುವುದರಿಂದ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದೆ. ಇದೇ ನೀರನ್ನು ಕುಡಿಯುತ್ತಿರುವುದರಿಂದ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ವಾಯು ಮಾಲಿನ್ಯದಿಂದ ಉಸಿರಾಟ ತೊಂದರೆ ಹೆಚ್ಚಾಗಿದೆ’ ಎಂದು ದೂರಿದರು.

‘ನವಲಿ ಸಮಾನಾಂತರ ಜಲಾಶಯ ನಿರ್ಮಿಸಬೇಕು. ಜೋಳ ಖರೀದಿ ಕೇಂದ್ರ ಜ.1ರಿಂದ ಆರಂಭಿಸಬೇಕು. ಕಾಲುವೆಯ ಕೆಳಭಾಗದ ರೈತರಿಗೆ ನೀರು ತಲುಪಿಸಬೇಕು. ಕಳಪೆ ಬೀಜ, ಗೊಬ್ಬರ ಮಾರಾಟ ತಡೆಗಟ್ಟಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಎರಡನೇ ಬೆಳೆಗೆ ನೀರು ಇಲ್ಲದ ಕಾರಣ ರೈತರಿಗೆ ಪ್ರತಿ ಎಕರೆಗೆ ₹30 ಸಾವಿರ ಪರಿಹಾರ ಕೊಡಬೇಕು. ಭತ್ತಕ್ಕೆ ಬೆಂಬಲ ಬೆಲೆ ಕನಿಷ್ಠ ₹4 ಸಾವಿರ ನಿಗದಿಪಡಿಸಬೇಕು. ಬೆಲೆ ಖಾತ್ರಿ ಕಾಯ್ದೆ ಜಾರಿಗೊಳಿಸಬೇಕು. ಸಿಎಸ್‍ಎಫ್ ಕ್ಯಾಂಪಿನಲ್ಲಿ 500 ಎಕರೆ ಕುರಿಗಾಯಿಗಳಿಗೆ ಮೀಸಲಿಡಬೇಕು. ತುಂಗಭದ್ರಾ ಜಲಾಶಯದ 33 ಗೇಟ್‍ಗಳನ್ನು ಆದಷ್ಟು ಶೀಘ್ರ ಹೊಸದಾಗಿ ಅಳವಡಿಸಬೇಕು ಎಂಬ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ.23 ರಂದು ಸಿಂಧನೂರಿನ ಎಪಿಎಂಸಿಯಲ್ಲಿ ಸಮಾವೇಶ ನಡೆಸಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

ಜೈ ಜವಾನ್ ಜೈ ಕಿಸಾನ್ ಜನಸೇವಾ ಸಂಘದ ಸಂಸ್ಥಾಪಕ ವೀರಭದ್ರಯ್ಯ ಎಸ್, ಕಲ್ಯಾಣ ಕರ್ನಾಟಕ ಗೌರವಾಧ್ಯಕ್ಷ ವೆಂಕಯ್ಯ ಶ್ರೇಷ್ಠಿ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ್ ಬಿಂಗಿ, ಕಾರ್ಯಾಧ್ಯಕ್ಷ ನಿರುಪಾದಿ ಅಡ್ಡಿ, ಮುಖಂಡರಾದ ಮಲ್ಲಿಕಾರ್ಜುನ ರೆಡ್ಡಿ, ಯಮನಪ್ಪ ಪಗಡದಿನ್ನಿ, ಮಲ್ಲಯ್ಯಸ್ವಾಮಿ, ಅಮರೇಗೌಡ ಬಾದರ್ಲಿ, ರವಿಕುಮಾರ ಬಸಾಪುರ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.