ADVERTISEMENT

ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ: ವ್ಯಾಪಕ ಪ್ರತಿಭಟನೆ, ಕಲ್ಲು ತೂರಾಟ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 13:01 IST
Last Updated 25 ಏಪ್ರಿಲ್ 2019, 13:01 IST
ರಾಯಚೂರಿನಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸುವಂತೆ ಹಲವು ಸಂಘಟನೆಗಳ ಸದಸ್ಯರು ಹೋರಾಟ ನಡೆಸುವಾಗ ಕಲ್ಲು, ಚಪ್ಪಲಿ ತೂರಾಟ ನಡೆದಿದ್ದರಿಂದ ಪೊಲೀಸರು ಗುಂಪನ್ನು ಚದುರಿಸಿದರು
ರಾಯಚೂರಿನಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸುವಂತೆ ಹಲವು ಸಂಘಟನೆಗಳ ಸದಸ್ಯರು ಹೋರಾಟ ನಡೆಸುವಾಗ ಕಲ್ಲು, ಚಪ್ಪಲಿ ತೂರಾಟ ನಡೆದಿದ್ದರಿಂದ ಪೊಲೀಸರು ಗುಂಪನ್ನು ಚದುರಿಸಿದರು   

ರಾಯಚೂರು: ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಕೊಲೆ ಪ್ರಕರಣದ ಅಪರಾಧಿಗಳನ್ನು ಪತ್ತೆ ಮಾಡುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಹೋರಾಟ ದಿನ ಕಳೆದಂತೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಕಲ್ಲುತೂರಾಟ ಘಟನೆ ನಡೆಯಿತು.

ಮನವಿ ಸಲ್ಲಿಸಲು ಬಂದವರನ್ನೆಲ್ಲ ಜಿಲ್ಲಾಧಿಕಾರಿ ಕಚೇರಿಯ ಮುಖ್ಯದ್ವಾರದಲ್ಲಿಯೇ ಪೊಲೀಸರು ತಡೆದು ನಿಲ್ಲಿಸಿದ್ದರು. ಈ ವೇಳೆ ಆಕ್ರೋಶಗೊಂಡ ಕೆಲವರು ಪೊಲೀಸರ ಮೇಲೆ ನೀರಿನ ಪ್ಯಾಕೇಟ್‌ಗಳನ್ನು, ಕಲ್ಲುಗಳನ್ನು ಹಾಗೂ ಚಪ್ಪಲಿಗಳನ್ನು ತೂರಿದರು. ಪೊಲೀಸರಿಗೆ ಸಣ್ಣ ಪ್ರಮಾಣದ ಗಾಯಗಳಾದವು. ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಗುರು ಅವರ ಕಣ್ಣಿನ ಮೇಲೆ ಪೆಟ್ಟಾಯಿತು.

ADVERTISEMENT

ಮೊದಲೇ ನಿರ್ಧರಿಸಿದಂತೆ, ಜಿಲ್ಲಾ ವಿಶ್ವಕರ್ಮ ಸಮಾಜವು ಮಾಣಿಕಪ್ರಭು ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿತು. ಇದರೊಂದಿಗೆ ಜೈನ್‌ ಸಮಾಜದ ಮಹಿಳೆಯರು, ಅಲ್ಪಸಂಖ್ಯಾತರ ಸಮಯದಾಯದ ಮಹಿಳೆಯರು, ಎಐಡಿಎಸ್‌ಒ, ಎಸ್‌ಎಫ್‌ಐ, ಎಐಡಿವೈಒ ಹಾಗೂ ಎಬಿವಿಪಿ ಹಾಗೂ ಯುವ ಕಾಂಗ್ರೆಸ್‌ ಸೇರಿದಂತೆ ಅನೇಕ ಸಂಘಟನೆಗಳು ಮೆರವಣಿಗೆ ನಡೆಸಿದವು.

ಕನ್ನಡ ಚಲನಚಿತ್ರ ನಟ ಭುವನ ಮತ್ತು ಹರ್ಷಿಕಾ ಪೂಣಚ್ಚ ಕೂಡಾ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅಪರಾಧಿಗಳ ಪತ್ತೆಗೆ ಒತ್ತಾಯಿಸಿದರು. ವಿಶ್ವಕರ್ಮ ಸಮಾಜದ ಮುಖಂಡ ಮಾರುತಿ ಬಡಿಗೇರ ಅವರು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಅಸ್ವಸ್ಥರಾಗಿದ್ದರಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಜಿಲ್ಲಾಧಿಕಾರಿ ಶರತ್‌ ಬಿ. ಅವರು ಸ್ಥಳಕ್ಕೆ ಧಾವಿಸಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ಪೊಲೀಸರು ಲಘು ಲಾಠಿ ಬೀಸಿ ಗುಂಪನ್ನು ಚದುರಿಸಿದರು. ಕಲ್ಲುತೂರಾಟಕ್ಕೆ ಸಂಬಂಧಿಸಿದಂತೆ ಒಬ್ಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.