ರಾಯಚೂರು: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಬಿಜಗುಡ್ಡಿಯಲ್ಲಿ ಬಸವಣ್ಣನ ಪುತ್ಥಳಿ ಭಗ್ನಗೊಳಿಸಿದ ದುಷ್ಕರ್ಮಿಗಳ ಮೇಲೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಬಸವ ಕೇಂದ್ರ ಜಿಲ್ಲಾಘಟಕದ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಬುಧವಾರ ಮನವಿ ಸಲ್ಲಿಸಿದರು.
12 ನೇ ಶತಮಾನದಲ್ಲೇ ಪ್ರಜಾಪ್ರಭುತ್ವದ ಬುನಾದಿಯನ್ನು ಹಾಕಿ ಸಮಾಜದಲ್ಲಿ ಸರ್ವ ಸಮಾನತೆಯನ್ನು ತರಲು ಮಹಾನ್ ಕ್ರಾಂತಿ ಮಾಡಿದ ಅನುಭವ ಮಂಟಪದ ರೂವಾರಿ ಜಗಜ್ಯೋತಿ ಬಸವಣ್ಣನವರ ಪ್ರತಿಮೆಯನ್ನು ಬೆಳಗಾವಿಯ ಬಿಜಗುಡ್ಡಿಯಲ್ಲಿ ಕೆಲವು ದುಷ್ಕರ್ಮಿಗಳು ದ್ವಂಸಗೊಳಿಸಿದ್ದು ಖಂಡನೀಯ. ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಿ. ಭಗ್ನಗೊಂಡಿರುವ ಮೂರ್ತಿಯನ್ನು ತೆರವುಗೊಳಿಸಿ ಮತ್ತೊಂದು ಮೂರ್ತಿಯನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಮುಖಂಡ ಕೆ.ವೀರಭದ್ರಪ್ಪ, ಭಾನು ಪ್ರಕಾಶ, ಸೂಗಪ್ಪ ಚುಕ್ಕಿ, ರಾಚನಗೌಡ, ನಾಗನಗೌಡ ಹರವಿ, ಷಣ್ಮುಖಪ್ಪ, ಶಿವಶರಣರೆಡ್ಡಿ, ದೇವಣ್ಣ, ಸಿ.ವಿ ಪಾಟೀಲ, ಜೆ.ಬಸವರಾಜ, ವಿಜಯಕುಮಾರ, ಕೇಶವರೆಡ್ಡಿ, ಚಂದ್ರಶೇಖರ, ದಾನಮ್ಮ, ಸಜ್ಜನ, ಪಾರ್ವತಿ ಸೇರಿದಂತೆ ಬಸವ ಕೇಂದ್ರದ ತಾಲ್ಲೂಕು ಘಟಕಗಳ ಪದಾಧಿಕಾರಿಗಳು, ವೀರಶೈವ ರುದ್ರಸೇನೆ ಸಮಿತಿಯ ಪದಾಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.