
ರಾಯಚೂರು: ಜಿಲ್ಲೆಯಲ್ಲಿ ಚಳಿ ಕನಿಷ್ಠ ತಾಪಮಾನ 10 ಡಿಗ್ರಿ ಆಸುಪಾಸಿನಲ್ಲೇ ಇದೆ. ತಂಪು ಗಾಳಿಯೂ ಇರುವ ಕಾರಣ ಗ್ರಾಹಕರು ಬೆಳಗಿನ ಜಾವ ತರಕಾರಿ ಮಾರುಕಟ್ಟೆಗೆ ಬರಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಬಹುತೇಕ ತರಕಾರಿಗಳ ಬೆಲೆ ಸ್ಥಿರವಾಗಿದೆ.
ಕಿರೀಟಧಾರಿ ತರಕಾರಿ ರಾಜ ಬದನೆಕಾಯಿ ಗ್ರಾಹಕನ ಬೆಂಬಲಕ್ಕೆ ನಿಂತಿದ್ದಾನೆ. ಹಿರೇಕಾಯಿ ಚಳಿಗೆ ಕುಗ್ಗಿದೆ. ಟೊಮೆಟೊ ಸ್ವಲ್ಪ ಬಿರುಸಾಗಿದೆ. ಈರುಳ್ಳಿ, ಬೀಟ್ರೂಟ್, ಬೀನ್ಸ್, ತೊಂಡೆಕಾಯಿ, ಡೊಣಮೆಣಸಿನಕಾಯಿ, ತುಪ್ಪದ ಹಿರೇಕಾಯಿ ಬೆಲೆ ಸ್ಥಿರವಾಗಿದೆ. ಆಲೂಗಡ್ಡೆ, ಮೆಣಸಿನಕಾಯಿ, ಟೊಮೆಟೊ, ಬೆಂಡೆಕಾಯಿ, ಚವಳೆಕಾಯಿ ಬೆಲೆ ಮಾತ್ರ ತುಸು ಹೆಚ್ಚಾಗಿದೆ. ಉಳಿದ ತರಕಾರಿ ಬೆಲೆ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಲಭ್ಯ ಇವೆ.
ಪ್ರತಿ ಕ್ವಿಂಟಲ್ಗೆ ಬೆಳ್ಳುಳ್ಳಿ, ಎಲೆಕೋಸು, ಹೂಕೋಸು, ಬದನೆಕಾಯಿ, ಸೌತೆಕಾಯಿ ಬೆಲೆ ₹ 1 ಸಾವಿರ, ಹಿರೇಕಾಯಿ, ಗಜ್ಜರಿ ₹ 2 ಸಾವಿರ, ನುಗ್ಗೆಕಾಯಿ ಬೆಲೆ ₹1,200 ಕಡಿಮೆಯಾಗಿದೆ. ಪ್ರತಿ ಕ್ವಿಂಟಲ್ಗೆ ಆಲೂಗಡ್ಡೆ, ಮೆಣಸಿನಕಾಯಿ, ಟೊಮೆಟೊ, ಚವಳೆಕಾಯಿ ಬೆಲೆ ₹ 1, ಬೆಂಡೆಕಾಯಿ ₹ 2 ಸಾವಿರ ಹೆಚ್ಚಾಗಿದೆ.
ಹೆಚ್ಚುದಿನ ಬಾಳಿಕೆ ಬರುವ ಕಾರಣ ನಾಸಿಕ್ನಿಂದಲೇ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬರುತ್ತಿದೆ. ಬೆಳಗಾವಿ ಹಾಗೂ ಬೈಲಹೊಂಗಲ ತಾಲ್ಲೂಕಿನಿಂದ ಹಸಿ ಮೆಣಸಿನಕಾಯಿ, ಕೊತಂಬರಿ, ಮೆಂತೆ, ಸಬ್ಬಸಗಿ ಸೊಪ್ಪು ಆವಕವಾಗಿದೆ. ಆಂಧ್ರಪ್ರದೇಶದ ಗಡಿ ಗ್ರಾಮ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಂದ ಸ್ವಲ್ಪ ಎಲೆಕೋಸು, ಹೂಕೋಸು, ಬದನೆಕಾಯಿ, ಅವರೆಕಾಯಿ ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ.
‘ಚಳಿಯ ಕಾರಣ ತರಕಾರಿ ಮಾರುಕಟ್ಟೆಯಲ್ಲಿ ಕೆಲ ತರಕಾರಿ ಬೆಲೆಗಳಲ್ಲಿ ಸ್ವಲ್ಪಮಟ್ಟಿಗೆ ಮಾತ್ರ ಏರಿಳಿತವಾಗಿದೆ. ಕಡಿಮೆಯಾಗಿವೆ. ಬಹುತೇಕ ಸೊಪ್ಪುಗಳ ಬೆಲೆ ಸ್ಥಿರವಾಗಿದೆ’ ಎಂದು ತರಕಾರಿ ವ್ಯಾಪಾರಿ ಸುನೀಲಕುಮಾರ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.