ADVERTISEMENT

ನೀರಾವರಿ ಯೋಜನೆ ರಾಜಕೀಯ ಗಿಮಿಕ್ ಆಗದಿರಲಿ- ಶಾಸಕ ಡಿ.ಎಸ್‍ ಹೂಲಗೇರಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 11:42 IST
Last Updated 17 ಜನವರಿ 2022, 11:42 IST
ಡಿ.ಎಸ್ ಹೂಲಗೇರಿ
ಡಿ.ಎಸ್ ಹೂಲಗೇರಿ   

ಲಿಂಗಸುಗೂರು: ‘ಮಾಜಿ ಶಾಸಕ ಮಾನಪ್ಪ ವಜ್ಜಲ ಅವರು ಕ್ಷೇತ್ರದ ಸಮಗ್ರ ನೀರಾವರಿಗಾಗಿ ಪ್ರತ್ಯೇಕ ಮೂರು ನೀರಾವರಿ ಯೋಜನೆಗಳನ್ನು ಮಂಜೂರು ಮಾಡಿಸಿ ವರ್ಷಾಂತ್ಯಕ್ಕೆ ಆರಂಭ ಮಾಡಿಸುವುದಾಗಿ ಹೇಳಿರುವುದನ್ನು ಸ್ವಾಗತಿಸುತ್ತೇವೆ. ಆದರೆ, ಈ ಹೇಳಿಕೆ ರಾಜಕೀಯ ಗಿಮಿಕ್‍ ಆಗದಿರಲಿ’ ಎಂದು ಶಾಸಕ ಡಿ.ಎಸ್‍ ಹೂಲಗೇರಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಚಾಪುರ, ಅಮರೇಶ್ವರ, ಡಾ.ಬಿ.ಆರ್ ಅಂಬೇಡ್ಕರ್ ಏತ ನೀರಾವರಿ ಯೋಜನೆಗಳ ಚಿಂತನೆ ಉನ್ನತವಾಗಿದೆ. ಸರ್ಕಾರದ ಮುಂದೆ ಮಂಜೂರಾತಿಗೆ ಸಲ್ಲಿಸಿರುವ ನೀಲನಕ್ಷೆ, ಯೋಜನಾ ವ್ಯಾಪ್ತಿ ಗ್ರಾಮ, ಅಂದಾಜು ವೆಚ್ಚ, ನೀರಿನ ಲಭ್ಯತೆ ಕುರಿತು ಬಹಿರಂಗ ಮಾಹಿತಿ ನೀಡಿದರೆ ಒಳಿತು. ವಜ್ಜಲ ಅವರು ತಮ್ಮ ಅವಧಿಯಲ್ಲಿ ಜಲ ವಿದ್ಯುತ್‍ ಉತ್ಪಾದನಾ ಘಟಕ ಆರಂಭಿಸಿ 5ಸಾವಿರ ಜನರಿಗೆ ಉದ್ಯೋಗ ನೀಡುವುದಾಗಿ ಹೇಳಿದಂತೆ ಆಗದಿರಲಿ’ ಎಂದರು.

‘ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರಿಗೆ ನೀಡಿರುವ ಮನವಿಗಳು ಕೃಷ್ಣಾ ಭಾಗ್ಯ ಜಲನಿಗಮಕ್ಕೆ ಶಿಫಾರಸ್ಸು ಆಗಿಲ್ಲ. ಕರ್ನಾಟಕ ನೀರಾವರಿ ನಿಗಮಕ್ಕೆ ಶಿಫಾರಸ್ಸು ಮಾಡಿರುವುದು ಮೊದಲ ಹೆಜ್ಜೆಯಲ್ಲಿಯೇ ಜನತೆ ದಾರಿ ತಪ್ಪಿಸಿದಂತಾಗಿದೆ. ತಾವು ಕೂಡ ನಂದವಾಡಗಿ ಏತ ನೀರಾವರಿ ಯೋಜನೆಯಡಿ ಕೈಬಿಟ್ಟು ಹೋಗಿರುವ 34 ಗ್ರಾಮಗಳ ಸೇರ್ಪಡೆಗೆ ಅಧಿವೇಶನದಲ್ಲಿ ಪ್ರಶ್ನಿಸಿದ್ದೆ. ಆಗ 2ನೇ ಹಂತದ ನಂದವಾಡಗಿ ಯೋಜನೆಯಡಿ ಸೇರ್ಪಡೆ ಮಾಡಿಕೊಳ್ಳುವ ಭರವಸೆ ನೀಡಿದೆ’ ಎಂದರು.

ADVERTISEMENT

‘ಕ್ಷೇತ್ರದ ಉಪ್ಪಾರ ನಂದಿಹಾಳ, ಕಿಲ್ಲಾರಹಟ್ಟಿ, ಬೊಮ್ಮನಾಳ, ಭೋಗಾಪುರ, ಉಳಿಮೇಶ್ವರ, ಕನ್ನಾಪುರಹಟ್ಟಿ, ಮುದಗಲ್ಲ ಕೆರೆಗಳಿಗೆ ನೀರು ತುಂಬಿಸಲು ಮನವಿ ಮಾಡಲಾಗಿತ್ತು. ಸರ್ಕಾರ ಏಳು ಕೆರೆಗಳ ಭರ್ತಿಗೆ ಅನುಮೋದನೆ ನೀಡಿದ್ದು ಶೀಘ್ರದಲ್ಲಿಯೆ ಕೆರೆ ತುಂಬಿಸುವ ಕಾರ್ಯ ಆರಂಭಗೊಳ್ಳುವುದು. ನೂತನ ನ್ಯಾಯಾಲಯಗಳ ಕಟ್ಟಡ ಹಾಗೂ ಉಪ ನೋಂದಣಾಧಿಕಾರಿಗಳ ಕಚೇರಿ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಪುರಸಭೆ ಉಪಾಧ್ಯಕ್ಷ ಎಂ.ಡಿ ರಫಿ. ಬ್ಲಾಕ್‍ ಕಾಂಗ್ರೆಸ್‍ ಅಧ್ಯಕ್ಷ ಭೂಪನಗೌಡ ಕರಡಕಲ್ಲ. ಮುಖಂಡರಾದ ಮಲ್ಲಣ್ಣ ವಾರದ, ಗುಂಡಪ್ಪ ನಾಯಕ, ಪಾಮಯ್ಯ ಮುರಾರಿ, ಚೆನ್ನಬಸವ ವಿಠಲಾಪುರ, ಪರಶುರಾಮ ನಗನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.