ADVERTISEMENT

ಮಹಿಳೆಯರು ಧೈರ್ಯವಾಗಿ ಸಮಸ್ಯೆ ಎದುರಿಸಿ: ಡಾ.ನಾಗಲಕ್ಷ್ಮಿ ಚೌಧರಿ

ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 5:58 IST
Last Updated 4 ಡಿಸೆಂಬರ್ 2025, 5:58 IST
ಲಿಂಗಸುಗೂರು ಸಮೀಪದ ಕಸಬಾಲಿಂಗಸುಗೂರು ಗ್ರಾಮದ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಉದ್ಘಾಟಿಸಿದರು.
ಲಿಂಗಸುಗೂರು ಸಮೀಪದ ಕಸಬಾಲಿಂಗಸುಗೂರು ಗ್ರಾಮದ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಉದ್ಘಾಟಿಸಿದರು.   

ಲಿಂಗಸುಗೂರು: ‘ಯಾವುದೇ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಲು ಹೆಣ್ಣುಮಕ್ಕಳು ಉತ್ತಮ ಶಿಕ್ಷಣ ಪಡೆದು ಸಂಘಟಿತರಾಗಬೇಕು’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಹೇಳಿದರು.

ಪುರಸಭೆ ವ್ಯಾಪ್ತಿಯ ಕಸಬಾಲಿಂಗಸುಗೂರು ಗ್ರಾಮದಲ್ಲಿ ಕುಪ್ಪಿಭೀಮ ದೇವರ ಮಹಾರಥ ಶತಮಾನೋತ್ಸವ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಶಿಕ್ಷಣ ಮಹಿಳೆಯರ ಭವಿಷ್ಯ ನಿರ್ಧರಿಸುವ ಬಹುದೊಡ್ಡ ಅಸ್ತ್ರವಾಗಿದೆ. ಹಾಗಾಗಿ ಹೆಣ್ಣುಮಕ್ಕಳು ತಮ್ಮ ಓದಿನ ಕಡೆಗೆ ಗಮನಹರಿಸುವ ಮೂಲಕ ಸಾಧನೆಯ ಶಿಖರವೇರಬೇಕು’ ಎಂದರು. ಹೆಣ್ಣುಮಕ್ಕಳು ಹೊರಗಿನ ಪ್ರಪಂಚದ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು. ಹೆಣ್ಣುಮಕ್ಕಳು ತಮ್ಮ ಹಕ್ಕುಗಳು, ರಕ್ಷಣೆಯ ಕಾನೂನುಗಳು, ಭದ್ರತೆ ಹಾಗೂ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಅರಿವು ಹೊಂದಬೇಕು. ಕಾನೂನು ಬಗೆಗೆ ತಾವು ಅರಿತು ಸಮಾಜದ ಇತರರಿಗೂ ಅರಿವು ಮೂಡಿಸಬೇಕು. ಆಗ ಮಾತ್ರ ಮಹಿಳೆಯರ ಸಬಲೀಕರಣ ಸಾಧ್ಯವಾಗಲಿದೆ’ ಎಂದರು.

‘ಹೆಣ್ಣುಮಕ್ಕಳಿಗೆ ಮೊಬೈಲ್ ಮಾರಕವಾಗಿ ಪರಿಣಮಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅತಿಹೆಚ್ಚು ಎಚ್ಚರ ವಹಿಸಬೇಕಿದೆ. ಗೊತ್ತಿಲ್ಲದವರ ಜೊತೆ ಸ್ನೇಹ ಹೊಂದಬಾರದು. ಫೇಕ್ ಅಂಕೌಂಟ್‌ಗಳಿಂದ ಮೋಸ ಹೋಗುತ್ತಿದ್ದಾರೆ ಇದು ತಪ್ಪಬೇಕು. ಮಹಿಳೆಯರು ಮೊಬೈಲ್‌ಗಳಿಂದ ಪ್ರಭಾವಿತರಾಗದೇ ಸಕಾರಾತ್ಮಕ ಚಿಂತನೆಗಳಿಗೆ ಅದ್ಯತೆ ನೀಡಬೇಕು. ಸದೃಢ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಹೆಣ್ಣುಮಕ್ಕಳು ಭಯಭೀತರಾಗಬಾರದು ಇಲ್ಲದಿದ್ದಲ್ಲಿ ಸಮಾಜದಲ್ಲಿ ಶೋಷಣೆಗೊಳಗಾಗುತ್ತೀರಿ. ಮಕ್ಕಳು ಸಮಾಜದಲ್ಲಿ ಯಾವುದೇ ಬಗೆಯ ದೌರ್ಜನ್ಯಗಳಾದರೂ ನೇರವಾಗಿ ಪೊಲೀಸರಿಗೆ ದೂರು ನೀಡಬೇಕು. ಸಹಾಯವಾಣಿ ಸಂಖ್ಯೆ 112 ಗೆ ಕರೆಮಾಡಿ ತಿಳಿಸಬೇಕು. ನಿಮ್ಮ ನೆರವಿಗೆ ಪೊಲೀಸರು ಸದಾಸಿದ್ಧರುತ್ತಾರೆ’ ಎಂದರು.

ADVERTISEMENT

‘ವಿವಿಧ ಕಾರಣಗಳಿಂದ ಪೋಷಕರಿಂದ ಬೇರ್ಪಟ್ಟು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಿ ಮಕ್ಕಳು ಕೌಟುಂಬಿಕ ವ್ಯವಸ್ಥೆಯಲ್ಲಿಯೇ ಬೆಳೆಯಲು ನೆರವಾಗಲು ಪೋಷಕತ್ವ ಯೋಜನೆಯಡಿಯಲ್ಲಿ ಮಕ್ಕಳ 18 ವರ್ಷದವರೆಗೆ ಆ ಮಕ್ಕಳ ಬ್ಯಾಂಕ್ ಖಾತೆಗೆ ₹4 ಸಾವಿರ  ಆರ್ಥಿಕ ಸಹಾಯ ನೀಡುವ ಯೋಜನೆ ಸರ್ಕಾರ ಜಾರಿಗೆ ತಂದಿದೆ. ಇಂತಹ ಅನೇಕ ಯೋಜನೆಗಳ ಬಗ್ಗೆ ಅರಿವು ಹೊಂದಬೇಕು’ ಎಂದರು.

ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ, ಮಾತೆ ನಂದಿಕೇಶ್ವರಿ, ಶಿವಕುಮಾರ ಸ್ವಾಮೀಜಿ, ದೊಡ್ಡ ಬಸವಾರ್ಯ ಸ್ವಾಮೀಜಿ, ಬಸವಪ್ರಸಾದ ಸ್ವಾಮೀಜಿ, ಶಾಸಕ ಮಾನಪ್ಪ ವಜ್ಜಲ್, ತಹಶೀಲ್ದಾರ್‌ ಸತ್ಯಮ್ಮ, ಅಬಕಾರಿ ನಿರೀಕ್ಷಕಿ ಲಕ್ಷ್ಮೀದೇವಿ, ಉಪನ್ಯಾಸಕಿ ಈರಮ್ಮ ಹಿರೇಮಠ, ಬಿಇಒ ಸುಜಾತ ಹೂನೂರು, ಸಿಡಿಪಿಒ ನಾಗರತ್ನ, ಅಮರಮ್ಮ ವಜ್ಜಲ್, ಲಕ್ಷ್ಮಿ ಹೂಲಗೇರಿ, ಲಕ್ಷ್ಮೀದೇವಿ ನಡುವಿನಮನಿ, ಸಿದ್ದು ಬಂಡಿ, ವಿಜಯಲಕ್ಷ್ಮಿ ದೇಸಾಯಿ ಸೇರಿದಂತೆ ಅನೇಕರು ಹಾಜರಿದ್ದರು. 

ಕಸಬಾಲಿಂಗಸುಗೂರು ಗ್ರಾಮದಲ್ಲಿ ಎರಡು ಸಾವಿರ  ಮಹಿಳೆಯರಿಗೆ ಉಡಿ ತುಂಬಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.