ADVERTISEMENT

‘ಜನಪದರಲ್ಲಿ ಹಾಸುಹೊಕ್ಕಾಗಿರುವ ಗ್ರಾಮದೇವತೆಗಳು’

​ಪ್ರಜಾವಾಣಿ ವಾರ್ತೆ
Published 14 ಮೇ 2018, 9:48 IST
Last Updated 14 ಮೇ 2018, 9:48 IST

ಮಾಗಡಿ: ‘ಗ್ರಾಮದೇವತೆಗಳು ಜನಪದರ ಬದುಕಿನಲ್ಲಿ ಹಾಸುಹೊಕ್ಕಾಗಿರುವುದು ಮಾತ್ರವಲ್ಲ ಬದುಕು ನಿಯಂತ್ರಿಸುವ ಸಾಧನಗಳೂ ಆಗಿವೆ’ ಎಂದು ತಿರುಮಲೆ ಕನ್ನಡ ಕೂಟದ ಸಂಚಾಲಕ ಟಿ.ಎಂ.ಶ್ರೀನಿವಾಸ್ ತಿಳಿಸಿದರು.

ತಿರುಮಲೆ ಸಹ್ಯಾದ್ರಿವನದಲ್ಲಿ ಮುಳಕಟ್ಟಮ್ಮ ದೇವಿ ಜಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮದೇವತೆ ನಂಬಿಕೆ ಹಳ್ಳಿಹಳ್ಳಿಗಳನ್ನು ತುಂಬಿಕೊಂಡಿರುವ ಮೌಲ್ಯವಲ್ಲ; ಅದು ಒಂದು ಸಮಾಜದ ಚಿಂತನಾ ಕ್ರಮದ ಕನ್ನಡಿ ಎಂಬುದನ್ನು ಆಧುನಿಕ ಯುವಜನರಿಗೆ ಪರಿಚಯಿಸುವ ಅಗತ್ಯವಿದೆ. ಪೂಜಾರಿ ರಂಗಯ್ಯ ವಂಶಸ್ಥರು ತಲೆತಲಾಂತರದಿಂದ ದೈವೀ ಕಲ್ಪನೆಯನ್ನು ಜನಪದ ಮೂಲಕದ ಜತನದಿಂದ ಕಟ್ಟಿಕೊಂಡು ಬಂದಿದ್ದು, ಆದಿಶಕ್ತಿ ಮುಳಕಟ್ಟಮ್ಮ ದೇವಿ ಜನಜಾನುವಾರುಗಳಿಗೆ ಬರುವ ಜಾಢ್ಯ ನಿವಾರಿಸುತ್ತಾಳೆ. ಜತೆಗೆ, ಬೆವರು ಸುರಿಸಿ ದುಡಿಯುವ ಜನರಿಗೆ ಬೆಂಗಾವಲಿಗೆ ನಿಲ್ಲುತ್ತಾಳೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

ವಕೀಲ ನಾರಾಯಣಸ್ವಾಮಿ ಮಾತನಾಡಿ ಜನಪದ ಸಂಸ್ಕೃತಿಗೆ ಆಚರಣೆಯೇ ಬೆನ್ನೆಲುಬು ಎಂದರು. ದೇಗುಲದ ಭಕ್ತಮಂಡಳಿ ಸಂಚಾಲಕಿ ಮಂಜುಳಾ ಶ್ರೀನಿವಾಸ್‌, ಪೂಜಾರಿ ಗೋವಿಂದರಾಜು, ರತ್ನಮ್ಮ, ಕೃಷ್ಣಕುಮಾರ್‌, ಎಂಜಿನಿಯರ್‌ ದಿವ್ಯಶ್ರೀ, ಬಾಲಾಜಿ, ಹರೀಶ್‌, ಗಿರೀಶ್‌ ಕುಮಾರ್‌ ಮುಳಕಟ್ಟಮ್ಮ ದೇವಿಯ ಜನಪದ ಹಿನ್ನೆಲೆ ಕುರಿತು ಮಾತನಾಡಿದರು.

ADVERTISEMENT

ತಿರುಮಲೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಬೆಂಗಳೂರಿನಿಂದ ಬಂದಿದ್ದ ಭಕ್ತರು ಇದ್ದರು. ದೇವತೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ತಿರುಮಲೆ ರಾಜಬೀದಿಯಲ್ಲಿ ಮುಳಕಟ್ಟಮ್ಮದೇವಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ಸಾಮೂಹಿಕ ಭೋಜನ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.