ರಾಮನಗರ: ಕೆಎಸ್ಆರ್ಟಿಸಿ ನೌಕರರ ಮುಷ್ಕರ ಮೂರನೇ ದಿನವಾದ ಶುಕ್ರವಾರವೂ ಮುಂದುವರಿಯಿತು. ಈ ನಡುವೆಯೂ ರಾಮನಗರ ಘಟಕ ವ್ಯಾಪ್ತಿಯಲ್ಲಿ 9 ಬಸ್ಗಳು ಸಂಚಾರ ನಡೆಸಿದವು.
ರಾಮನಗರ ಡಿಪೊದಿಂದ 5, ಆನೇಕಲ್ ಡಿಪೊದಿಂದ 2 ಹಾಗೂ ಹಾರೋಹಳ್ಳಿ, ಚನ್ನಪಟ್ಟಣ ಡಿಪೊದಿಂದ ತಲಾ 1 ಬಸ್ಗಳು ಕಾರ್ಯಾಚರಣೆ ನಡೆಸಿದವು. ರಾಮನಗರ ಬಸ್ ನಿಲ್ದಾಣದಿಂದ ಚನ್ನಪಟ್ಟಣ, ಮಾಗಡಿ, ಕನಕಪುರ, ಬಿಡದಿ ಹಾಗೂ ಆನೇಕಲ್ ಬಸ್ ನಿಲ್ದಾಣದಿಂದ ಹೊಸೂರು ಮಾರ್ಗದಲ್ಲಿ ಬಸ್ ಸಂಚರಿಸಿದವು. ಆದರೆ ಈ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಮಾತ್ರ ಕಡಿಮೆ ಇತ್ತು. ಬೇರೆ ಬೇರೆ ಹುದ್ದೆಯಲ್ಲಿ ಇದ್ದವರನ್ನೂ ಬಸ್ ಸೇವೆಗೆ ನಿಯೋಜನೆ ಮಾಡಲಾಗಿತ್ತು.
ವಾರಾಂತ್ಯ ಹಾಗೂ ಯುಗಾದಿ ಹಬ್ಬದ ರಜೆ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಸಂಚಾರ ದಟ್ಟಣೆ ಕಂಡುಬಂದಿತು. ಹೆಚ್ಚಿನ ಮಂದಿ ಬೆಂಗಳೂರು, ರಾಮನಗರದಿಂದ ಹೊರ ಊರುಗಳತ್ತ ಹೊರಟರು. ಹೀಗಾಗಿ ಖಾಸಗಿ ಬಸ್ಗಳಲ್ಲಿ ಸಂಜೆ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು.
ಗ್ರಾಮೀಣ ಸಾರಿಗೆಗೆ ಹೊಡೆತ
ಮುಷ್ಕರ ಆರಂಭವಾದ ದಿನದಿಂದ ಈವರೆಗೆ ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್ ಮೊದಲಾದ ವಾಹನಗಳು ನಗರ ಸಾರಿಗೆಯತ್ತ ಮುಖ ಮಾಡಿವೆ. ಹೆಚ್ಚಿನ ವಾಹನಗಳು ಬೆಂಗಳೂರು–ಮೈಸೂರು ಮಾರ್ಗದಲ್ಲಿ ಸಂಚರಿಸುತ್ತಿವೆ. ಇಷ್ಟು ದಿನ ಹಳ್ಳಿಗಳಿಗೆ ಸಾರಿಗೆ ಸೇವೆ ಒದಗಿಸುತ್ತಿದ್ದ ಈ ವಾಹನಗಳ ಸೇವೆ ಇಲ್ಲದೆ ಗ್ರಾಮೀಣ ಜನರು ಪಟ್ಟಣದತ್ತ ಬರಲು ಪರದಾಟ ನಡೆಸುವಂತೆ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.