ADVERTISEMENT

ಬಿಡದಿ: ಇಸ್ಪೀಟ್ ಚಟಕ್ಕೆ ಅಮಾಯಕನ ಕೊಲೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 23:33 IST
Last Updated 18 ನವೆಂಬರ್ 2025, 23:33 IST
<div class="paragraphs"><p>ವೀರಭದ್ರಸ್ವಾಮಿ, ಕೊಲೆ ಆರೋಪಿ</p></div>

ವೀರಭದ್ರಸ್ವಾಮಿ, ಕೊಲೆ ಆರೋಪಿ

   

ಬಿಡದಿ (ರಾಮನಗರ): ಇಸ್ಪೀಟ್ ಜೂಜಾಟದ ಚಟಕ್ಕೆ ಬಿದ್ದ ಹೋಟೆಲ್‌ನ ಅಡುಗೆ ಕೆಲಸಗಾರನೊಬ್ಬ, ಹಣಕ್ಕಾಗಿ ಅದೇ ಹೋಟೆಲ್‌ನಲ್ಲಿ ರಾತ್ರಿ ಸೆಕ್ಯೂರಿಟಿ ಗಾರ್ಡ್‌ ಆಗಿದ್ದ ಯುವಕನನ್ನು ಕೊಲೆ ಮಾಡಿ ಇದೀಗ ಬಿಡದಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. 

ಅಂದಹಾಗೆ ಈ ಘಟನೆ ನಡೆದಿದ್ದು ನ. 15ರಂದು ಬಿಡದಿ ಹೊರವಲಯದ ಲಕ್ಷ್ಮಿಸಾಗರ ಗೇಟ್‌ನಲ್ಲಿರುವ ಕದಂಬ ಹೋಟೆಲ್‌ನಲ್ಲಿ. ಚನ್ನಪಟ್ಟಣ ತಾಲ್ಲೂಕಿನ ಕೊಂಡಾಪುರ ಗ್ರಾಮದ ನಿಶಾಂತ್ (25) ಕೊಲೆಯಾದ ಯುವಕ. ರಾಮನಗರ ತಾಲ್ಲೂಕಿನ ಚಿಕ್ಕಗಂಗವಾಡಿ ಗ್ರಾಮದ ವೀರಭದ್ರಸ್ವಾಮಿ (32) ಕೊಲೆ ಆರೋಪಿ.

ADVERTISEMENT

ಕೊಲೆಯಾದ ಯುವಕ ಮತ್ತು ಆರೋಪಿ ಇಬ್ಬರೂ ಎರಡೂವರೆ ತಿಂಗಳಿಂದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು.  ನಿಶಾಂತ್ ಅವರು ತಮ್ಮ ಕುಟುಂಬದ ಮೂವರು ಮಕ್ಕಳ ಪೈಕಿ ಏಕಮಾತ್ರ ಪುತ್ರನಾಗಿದ್ದರು. ಆರ್ಗ್ಯಾನಿಕ್ ಫುಡ್‌ನಲ್ಲಿ ಡೆಲಿವರ್ ಬಾಯ್ ಆಗಿದ್ದ ನಿಶಾಂತ್, ಅಲ್ಲಿಯ ಕೆಲಸ ತೊರೆದು ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದರು.

ಚಟಕ್ಕಾಗಿ ಸಾಲ ಮಾಡಿದ್ದ: ಆರೋಪಿ ವೀರಭದ್ರಸ್ವಾಮಿ ವಿವಾಹಿತನಾಗಿದ್ದು, ಮೂರೂವರೆ ವರ್ಷದ ಪುತ್ರ ಕೂಡ ಇದ್ದಾನೆ. ಹೋಟೆಲ್‌ನಲ್ಲಿ ದೋಸೆ ತಯಾರಿಸುವ ಕೆಲಸ ಮಾಡುತ್ತಿದ್ದ ಆತ, ಇಸ್ಪೀಟ್ ಜೂಜಾಟದ ಚಟ ಹೊಂದಿದ್ದ. ಜೂಜಾಡಿ ಹಲವೆಡೆ ಸಾಲ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದರು.

ಹೋಟೆಲ್‌ನ ವ್ಯವಹಾರ ಮುಗಿದ ಬಳಿಕ ಕೌಂಟರ್‌ನಲ್ಲೇ ಕ್ಯಾಷಿಯರ್ ಹಣ ಇಟ್ಟು ಹೋಗುತ್ತಿದ್ದನ್ನು ಆರೋಪಿ ಗಮನಿಸಿದ್ದ. ತನ್ನ ಚಟಕ್ಕಾಗಿ ಹೋಟೆಲ್‌ನಲ್ಲಿ ಹಣ ಕದಿಯಲು ಸಂಚು ಮಾಡಿದ್ದ ಆರೋಪಿ, ರಾತ್ರಿ 2.30ರ ಸುಮಾರಿಗೆ ಹಣ ಕದಿಯಲು ಮುಂದಾಗಿದ್ದ ಎಂದು ಪೊಲೀಸರು ಹೇಳಿದರು.

ಆಗ ಸಮೀಪದ ಸರ್ವೀಸ್ ಹಾಲ್‌ನಲ್ಲಿ ಕುರ್ಚಿಗಳ ಮಧ್ಯೆ ಸೆಕ್ಯೂರಿಟಿ ಗಾರ್ಡ್ ನಿಶಾಂತ್ ಮಲಗಿರುವುದನ್ನು ಗಮನಿಸಿದ. ತಾನು ಹಣ ಕದಿಯುವುದು ಇವನಿಗೇನಾದರೂ ಗೊತ್ತಾದರೆ ತನಗೆ ಕಷ್ಟವಾಗುತ್ತದೆ ಎಂದುಕೊಂಡು, ಕಬ್ಬಿಣದ ರಾಡ್‌ನಿಂದ ಮಲಗಿದ್ದ ನಿಶಾಂತ್ ತಲೆಗೆ ಹೊಡೆದು ಕೊಲೆ ಮಾಡಿದ್ದ ಎಂದು ಪೊಲೀಸರು ಹೇಳಿದರು.

ಸಿಕ್ಕಿದ್ದು ₹7,500 ಮಾತ್ರ: ಘಟನೆ ನಡೆದ ದಿನ ಕ್ಯಾಶ್ ಕೌಂಟರ್‌ನಲ್ಲಿ ಸುಮಾರು ₹3 ಲಕ್ಷ ನಗದು ಇತ್ತು. ಆದರೆ, ಕೃತ್ಯದ ಬಳಿಕ ಆರೋಪಿ ತಡಕಾಡಿದಾಗ ಆತನಿಗೆ ಕೇವಲ ₹7,500 ಮಾತ್ರ ಸಿಕ್ಕಿತ್ತು. ಆ ಹಣದ ಜೊತೆಗೆ ತನ್ನ ಕೃತ್ಯ ದಾಖಲಾಗಿರುವ ಹೋಟೆಲ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾದ ಡಿವಿಆರ್‌ ಎತ್ತಿಕೊಂಡು ಹೋಗಿದ್ದ. ಹೀಗಾಗಿ, ಆರೋಪಿಯ ಸುಳಿವು ಅಷ್ಟು ಬೇಗನೇ ಸಿಕ್ಕಿರಲಿಲ್ಲ ಎಂದು ಪೊಲೀಸರು ಹೇಳಿದರು.

ಬಿಡದಿ ಠಾಣೆ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ಮತ್ತು ಅವರ ತಂಡ ಸತತ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಮನೆಯಲ್ಲಿ ಡಿವಿಆರ್‌ ಬಚ್ಚಿಟ್ಟು ಆರಾಮವಾಗಿದ್ದ!

ಕೃತ್ಯದ ಬಳಿಕ ಆರೋಪಿ ವೀರಭದ್ರಸ್ವಾಮಿ ಹಣ ಮತ್ತು ಡಿವಿಆರ್‌ನೊಂದಿಗೆ ಮನೆಗೆ ಹೋಗಿದ್ದ. ಯಾರಿಗೂ ಕಾಣದಂತೆ ಡಿವಿಆರ್‌ ಬಚ್ಚಿಟ್ಟಿದ್ದ. ಘಟನಾ ಸ್ಥಳವನ್ನು ಪರಿಶೀಲಿಸಿದಾಗ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳ ಸಂಗ್ರಹವಿರುವ ಡಿವಿಆರ್‌ ಕಾಣೆಯಾಗಿರುವುದರಿಂದ ಪರಿಚಿತರೇ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಯಿತು. ಹೋಟೆಲ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಯ ವಿಚಾರಣೆ ನಡೆಸಲಾಯಿತು. ಕೃತ್ಯ ನಡೆದಿರುವ ಅವಧಿ ಆಧರಿಸಿ ಎಲ್ಲರ ಮೊಬೈಲ್ ಟವರ್ ಲೋಕೇಷನ್ ಪರಿಶೀಲಿಸಿದಾಗ ವೀರಭದ್ರನ ಮೇಲೆ ಅನುಮಾನ ಬಂತು. ಆತನನ್ನು ವಿಚಾರಣೆ ನಡೆಸಿದಾಗ ಆರಂಭದಲ್ಲಿ ಏನೂ ಗೊತ್ತಿಲ್ಲದವನಂತೆ ನಟಿಸಿದ. ಬಳಿಕ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಒಪ್ಪಿಕೊಂಡು ಮನೆಯಲ್ಲಿ ಬಚ್ಚಿಟ್ಟಿದ್ದ ಡಿವಿಆರ್‌ ಒಪ್ಪಿಸಿದ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.