ಚನ್ನಪಟ್ಟಣ: ನಗರದ ಸಾತನೂರು ಸರ್ಕಲ್ ಬಳಿಯ ಕಬ್ಬಾಳಮ್ಮ ಹೋಟೆಲ್ ಹಿಂಭಾಗದ ಖಾಲಿ ನಿವೇಶನದಲ್ಲಿ ಬಿಹಾರದ ವ್ಯಕ್ತಿಯೊಬ್ಬರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ.
ಕೊಲೆಯಾಗಿರುವ ವ್ಯಕ್ತಿಯನ್ನು ಬಿಹಾರದ ಸಂಜೀತ್ ಕುಮಾರ್ ಠಾಕೂರ್ (31) ಎಂದು ಗುರುತಿಸಲಾಗಿದೆ. ಖಾಲಿ ನಿವೇಶನದಲ್ಲಿ ಬಿದ್ದಿದ್ದ ಮೃತದೇಹವನ್ನು ಸ್ಥಳೀಯರು ಗುರುತಿಸಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ವ್ಯಕ್ತಿಯ ಜೇಬಿನಲ್ಲಿದ್ದ ಆಧಾರ್ ಕಾರ್ಡ್ ಆಧಾರದ ಮೇಲೆ ಗುರುತು ಪತ್ತೆಯಾಗಿದೆ. ಮಂಗಳವಾರ ರಾತ್ರಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಬಿಹಾರದ ರಾಮ್ ವಿಕಾಸ್ ಠಾಕೂರ್ ಅವರ ಮಗನಾಗಿರುವ ಇವರು ಬಿಹಾರದಿಂದ ಚನ್ನಪಟ್ಟಣಕ್ಕೆ ಏಕೆ ಬಂದಿದ್ದರು, ಇವರ ಸಂಬಂಧಿಕರು ಯಾರಾದರೂ ಇದ್ದಾರೆಯೇ, ಕೊಲೆ ಮಾಡಲು ಕಾರಣ ಏನು, ಕೊಲೆ ಮಾಡಿದವರು ಯಾರು ಎಂಬುದು ನಿಗೂಢವಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.