ಚನ್ನಪಟ್ಟಣ: ರಕ್ತದಾನದ ಮೂಲಕ ಹತ್ತಾರು ಮಂದಿಯ ಪ್ರಾಣ ಉಳಿಸುವ ಜೊತೆಗೆ ರಕ್ತದಾನ ಮಾಡುವ ವ್ಯಕ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಜಿಲ್ಲಾ ಕ್ಷಯ ರೋಗ ನಿವಾರಣಾಧಿಕಾರಿ ಕೆ. ಕುಮಾರ್ ಅಭಿಪ್ರಾಯಪಟ್ಟರು.
ನಗರದಲ್ಲಿ ರಾಮನಗರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ಚನ್ನಪಟ್ಟಣ ಲಯನ್ಸ್ ಸಂಸ್ಥೆ ಹಾಗೂ ಚನ್ನಪಟ್ಟಣ ಜೀವಾಮೃತ ರಕ್ತ ಕೇಂದ್ರ ಇವರ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
18 ವರ್ಷದಿಂದ 60 ವರ್ಷದವರೆಗಿನ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು. ಒಂದು ವರ್ಷದಲ್ಲಿ 4 ರಿಂದ 6 ಬಾರಿ ರಕ್ತದಾನ ಮಾಡಬಹುದು. ರಕ್ತದಾನ ಮಾಡಿದರೆ ದೇಹ ಹಾಗೂ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿ ಬೇರೂರಿದೆ. ಇದನ್ನು ತೊಡೆದುಹಾಕುವ ಅವಶ್ಯಕತೆ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜೀವಾಮೃತ ರಕ್ತಕೇಂದ್ರದ ಆಡಳಿತಾಧಿಕಾರಿ ಚಂದ್ರೇಗೌಡ ಮಾತನಾಡಿ, ಕೆಲವರಿಗೆ ರಕ್ತದಲ್ಲಿ ಕೆಲವು ಅಂಶಗಳು ಅಗತ್ಯಕ್ಕಿಂತ ಹೆಚ್ಚಿದ್ದರೂ ಸಹ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇಂಥವರು ರಕ್ತದಾನ ಮಾಡುವುದರಿಂದ ಆ ಆಂಶಗಳನ್ನು ಅಗತ್ಯ ಇದ್ದವರಿಗೆ ನೀಡುವ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚುಬಾರಿ ರಕ್ತದಾನ ಮಾಡಿರುವ ರಕ್ತದಾನಿಗಳಾದ ಚಂದ್ರಶೇಖರ್, ಧರಣಿ, ಕಿರಣ್ ಕುಮಾರ್, ಶಿವಕುಮಾರ್, ಸೋಗಾಲ ಜಗದೀಶ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್. ಗಂಗಾಧರ್, ಲಯನ್ಸ್ ಸಂಸ್ಥೆಯ ಅಧ್ಯಕ್ಷ ತಿಪ್ರೇಗೌಡ, ಭಾವಿಪದ ವಸಂತಕುಮಾರ್, ಗುರುಮಾದಯ್ಯ, ರಾಘವೆಂದ್ರ ಮಯ್ಯ, ನಳಿನಾ ಇತರರು ಭಾಗವಹಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.