ಮಾಗಡಿ (ರಾಮನಗರ): ತಾಲ್ಲೂಕಿನ ತಾಲ್ಲೂಕಿನ ಗುಡೆಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ಬೆಂಗಳೂರು-– ಮಂಗಳೂರು ಹೆದ್ದಾರಿಯಲ್ಲಿ ಬುಧವಾರ ತಡರಾತ್ರಿ ರಸ್ತೆ ವಿಭಜಕದ ಮೇಲಿನ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆ ಹೊಸಂಗಡಿಯವರಾದ ಕಿಶನ್ (35), ಮೋನಪ್ಪ ಮೇಸ್ತ್ರಿ (40), ಅಕ್ಷಯ್ (35) ಮೃತರು. ರಾಘವೇಂದ್ರ, ಚಂದ್ರಶೇಖರ್ ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ಬಾಲಕೃಷ್ಣ, ಮಹಾಬಲ, ಪುಷ್ಪರಾಜ್, ಜಗದೀಶ್ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೊಸಂಗಡಿಯ ತಂಡವೊಂದು ಶಬರಿಮಲೆ ಪ್ರವಾಸ ಮುಗಿಸಿಕೊಂಡು ಬುಧವಾರ ಮುಂಜಾನೆ ಊರಿಗೆ ವಾಪಸ್ ಆಗಿತ್ತು. ಅವರ ಪೈಕಿ 9ಮಂದಿ ತಿರುಪತಿಗೆ ಪ್ರವಾಸ ತೆರಳಿದ್ದರು. ದೇವರಿಗೆ ಪೂಜೆ ಸಲ್ಲಿಸಿ ಊರಿಗೆ ವಾಪಸ್ ಆಗುತ್ತಿದ್ದ ವೇಳೆ ಕಾರು ಅಪಘಾತ ನಡೆದಿದೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.