
ಚನ್ನಪಟ್ಟಣ: ತಾಲ್ಲೂಕಿನ ಕೋಡಂಬಹಳ್ಳಿಯಲ್ಲಿ ರಾಜ್ಯ ರೈತಸಂಘದ ಕೋಡಂಬಹಳ್ಳಿ ಶಾಖೆ ಪದಾಧಿಕಾರಿಗಳು ಶುಕ್ರವಾರ ರೈತನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಜನ್ಮದಿನಾಚರಣೆ ಆಚರಿಸಿದರು.
ರೈತ ಸಂಕುಲದ ಪ್ರಗತಿ, ರೈತರ ಸಮಸ್ಯೆಗಳಿಗೆ ನಂಜುಂಡಸ್ವಾಮಿ ನೀಡಿದ ಕೊಡುಗೆ ಗುಣಗಾನ ನಡೆಯಿತು.
ನಂತರ ಗ್ರಾಮದಲ್ಲಿರುವ ಬೆಸ್ಕಾಂ ಕಚೇರಿಗೆ ತಲುಪಿ ಗ್ರಾಮ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇದನ್ನು ಶೀಘ್ರ ಸರಿಪಡಿಸಬೇಕು ಎಂದು ಒತ್ತಾಯಿಸಿ ಬೆಸ್ಕಾಂ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಕೋಡಂಬಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಹಲವು ದಿನಗಳ ಹಿಂದೆ ಕೆಟ್ಟು ನಿಂತಿರುವ ವಿದ್ಯುತ್ ಪರಿವರ್ತಕ ಶೀಘ್ರ ಬದಲಾವಣೆ ಮಾಡಬೇಕು. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಇರುವ ಕಾರಣ ಕೃಷಿ ವಿದ್ಯುತ್ ಅನ್ನು ರಾತ್ರಿ ವೇಳೆ ನೀಡುವ ಬದಲು ಹಗಲು ಹೊತ್ತಿನಲ್ಲಿ ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ. ಜತೆಗೆ ಈ ಭಾಗದಲ್ಲಿ ವಿದ್ಯುತ್ ಪೂರೈಕೆ ಸೂಕ್ತವಾಗಿ ಮಾಡುತ್ತಿಲ್ಲ. ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಈ ಸಮಸ್ಯೆ ಶೀಘ್ರ ಪರಿಹರಿಸಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.
ಮನವಿಪತ್ರ ಸ್ವೀಕರಿಸಿದ ಬೆಸ್ಕಾಂ ಎಇಇ ಶಿವರಾಜ ಹೆಗ್ಗಡೆ, ಈ ಬಗ್ಗೆ ಶೀಘ್ರವೇ ಗಮನಹರಿಸಿ ಸಮಸ್ಯೆ ಪರಿಹಾರ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಪದಾಧಿಕಾರಿಗಳಾದ ರಾಮೇಗೌಡ, ಶಂಕರೇಗೌಡ, ಗೋಪಾಲ, ಈರಣ್ಣ ಯಲಿಯೂರು, ತಮ್ಮಯ್ಯಣ್ಣ ಕೊಂಡಾಪುರ, ರಾಜಣ್ಣ, ರವಿ, ಸ್ವಾಮಿ, ಪುಟ್ಟಸ್ವಾಮಿ, ಸ್ವಾಮಿ ನುಣ್ಣೂರು, ಶೇಖರ್, ನರಸಿಂಹ, ಮಾದೇವ, ಚಿಕ್ಕವೆಂಕಟಣ್ಣ, ಗೋವಿಂದಪ್ಪ, ಬಸವರಾಜು, ಸಿದ್ದೇಗೌಡ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.