ADVERTISEMENT

ಚನ್ನಪಟ್ಟಣ: ಗಣೇಶ ವಿಸರ್ಜನೆ ವೇಳೆ ನೀರಲ್ಲಿ ಮುಳುಗಿ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 13:35 IST
Last Updated 8 ಸೆಪ್ಟೆಂಬರ್ 2024, 13:35 IST
<div class="paragraphs"><p>ಪಾಪಣ್ಣ</p></div>

ಪಾಪಣ್ಣ

   

– ಪ್ರಜಾವಾಣಿ ಚಿತ್ರ

ಚನ್ನಪಟ್ಟಣ: ಗೌರಿ–ಗಣೇಶ ಹಬ್ಬದ ಅಂಗವಾಗಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಕೆರೆಯಲ್ಲಿ ವಿಸರ್ಜನೆ ಮಾಡುವಾಗ ಪಾಪಣ್ಣ (60) ಎಂಬುವರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಗರಕಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ADVERTISEMENT

ಗ್ರಾಮದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಾತ್ರಿಯೇ ವಿಸರ್ಜಿಸಲು ತೀರ್ಮಾನಿಸಲಾಗಿತ್ತು. ಗ್ರಾಮದಲ್ಲಿ ರಾತ್ರಿ ಮೂರ್ತಿಯನ್ನು ಮೆರವಣಿಗೆ ಮಾಡಿದ್ದ ಗ್ರಾಮಸ್ಥರು, ಊರಾಚೆಗಿನ ಕೆರೆಗೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ವಿಸರ್ಜನೆಗೆ ತೆಗೆದುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ ಪಾಪಣ್ಣ ಕೂಡ ಜೊತೆಗಿದ್ದರು. ಈ ವೇಳೆ ಅವರು ಸ್ವಲ್ಪ ಮದ್ಯಪಾನ ಕೂಡ ಮಾಡಿದ್ದರು ಎಂದು ಅಕ್ಕೂರು ಠಾಣೆ ಪೊಲೀಸರು ತಿಳಿಸಿದರು.

ಮೂರ್ತಿ ವಿಸರ್ಜನೆ ಮಾಡಿ ಎಲ್ಲರೂ ಮರಳಿದಾಗ ಪಾಪಣ್ಣ ಇನ್ನೂ ಮನೆಗೆ ಬಂದಿರಲಿಲ್ಲ. ಕುಟುಂಬದವರು ಮೂರ್ತಿ ವಿಸರ್ಜನೆಗೆ ಹೋಗಿದ್ದವರನ್ನು ವಿಚಾರಿಸಿ ಅಕ್ಕಪಕ್ಕ ಹುಡುಕಾಡಿದ್ದಾರೆ. ಎಲ್ಲೂ ಕಾಣದಿದ್ದಾಗ ಕಡೆಗೆ ಕೆರೆಯ ಬಳಿ ಹೋಗಿ ಪರಿಶೀಲನೆ ನಡೆಸಿದಾಗ, ಪಾಪಣ್ಣ ಅವರ ಟವೆಲ್ ಪತ್ತೆಯಾಗಿದೆ ಎಂದು ಹೇಳಿದರು.

ಭಾನುವಾರ ಬೆಳಿಗ್ಗೆ ಅಗ್ನಿಶಾಮಕದ ದಳದವರನ್ನು ಕರೆಯಿಸಿ ಕೆರೆಯಲ್ಲಿ ಹುಡುಕಾಟ ನಡೆಸಿದಾಗ, ಮಧ್ಯಾಹ್ನ 2.30ರ ಸುಮಾರಿಗೆ ಪಾಪಣ್ಣ ಅವರ ಶವ ಪತ್ತೆಯಾಯಿತು. ನಂತರ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.