ADVERTISEMENT

ರಾಮನಗರ: ಶೋಷಣೆ ತಪ್ಪಿಸಲು ಪೌರಕಾರ್ಮಿಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 5:20 IST
Last Updated 19 ಸೆಪ್ಟೆಂಬರ್ 2021, 5:20 IST
ಧರಣಿ ಕುರಿತ ಕರಪತ್ರಗಳನ್ನು ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಬಿಡುಗಡೆ ಮಾಡಿದರು. ಸಂಘದ ಅಧ್ಯಕ್ಷ ಚಲಪತಿ, ಉಪಾಧ್ಯಕ್ಷ ರಾಜು, ಕೊಂಡಲ್ ರಾವ್‌, ಚಂದ್ರಶೇಖರ್ ಇದ್ದರು
ಧರಣಿ ಕುರಿತ ಕರಪತ್ರಗಳನ್ನು ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಬಿಡುಗಡೆ ಮಾಡಿದರು. ಸಂಘದ ಅಧ್ಯಕ್ಷ ಚಲಪತಿ, ಉಪಾಧ್ಯಕ್ಷ ರಾಜು, ಕೊಂಡಲ್ ರಾವ್‌, ಚಂದ್ರಶೇಖರ್ ಇದ್ದರು   

ರಾಮನಗರ: ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ಇದೇ 21ರಂದು ಹಮ್ಮಿಕೊಂಡಿರುವ ಧರಣಿಯಲ್ಲಿ ಜಿಲ್ಲೆಯ ನೌಕರರು ಪಾಲ್ಗೊಳ್ಳಬೇಕು ಎಂದು ಸಂಘದ ಜಿಲ್ಲಾ ಅಧ್ಯಕ್ಷ ಚಲಪತಿ ಮನವಿ ಮಾಡಿದರು.

ಧರಣಿ ಪೂರ್ವ ಸಿದ್ಧತೆ ಕುರಿತು ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪೌರ ಕಾರ್ಮಿಕರ ಸಭೆಯಲ್ಲಿ ಅವರು ಮಾತನಾಡಿದರು.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ, ನೇರ ಪಾವತಿ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೇರ ಪಾವತಿ ಪೌರಕಾರ್ಮಿಕರು, ವಾಹನ ಚಾಲಕರು, ವಾಟರ್‌ಮನ್‍ಗಳು, ಡಾಟಾ ಎಂಟ್ರಿ ಆಪರೇಟರ್, ಯುಜಿಟಿ ಕಾರ್ಮಿಕರು ಧರಣಿಯಲ್ಲಿ ಪಾಲ್ಗೊಳ್ಳುವಂತೆ ಕೋರಿದರು.

ADVERTISEMENT

ಬೇಡಿಕೆಗಳು: ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ರಾಜು ಮಾತನಾಡಿ, ತಲಾ 500 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕನನ್ನು ನಿಯೋಜಿಸಬೇಕು. ಬಾಕಿ ಹುದ್ದೆಗಳ ಭರ್ತಿ, ಹೊರಗುತ್ತಿಗೆ ಪದ್ಧತಿ ಬದಲು ನೇರ ವೇತನ ಪಾವತಿಯಡಿ ನೇಮಕ, ವಿಮೆ, ಆರೋಗ್ಯ ತಪಾಸಣೆ ಮೊದಲಾದ ಸೌಲಭ್ಯಗಳಿಗೆ ಒತ್ತಾಯಿಸಿ ಈ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸರ್ಕಾರ ನಮ್ಮನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದೆ. ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ಶೋಷಣೆಗೆ ಒಳಪಡಿಸಿದೆ. ಸಕಾಲಕ್ಕೆ ಕನಿಷ್ಠ ವೇತನವೂ ನಮಗೆ ದೊರೆಯುತ್ತಿಲ್ಲ ಎಂದು
ದೂರಿದರು.

ಪದಾಧಿಕಾರಿಗಳಾದ ಕೊಂಡಲ್ ರಾವ್, ಎಲ್. ಚಂದ್ರಶೇಖರ್, ವೆಂಕಟರಾಮಣ್ಣ, ಫಾರೂಕ್, ವಾಸೀಂ, ಗಂಗಣ್ಣ, ಚಿಕ್ಕನರಸಯ್ಯ, ಶ್ರೀನಿವಾಸ್, ಮಹೇಂದ್ರ, ಗಣೇಶ್
ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.