ಚನ್ನಪಟ್ಟಣ: ‘ಇಲ್ಲಿನನೀಲಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀಲಕಂಠನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ವಿದ್ಯುತ್ ಕಂಬಗಳಿಗೆ ಬಳ್ಳಿಗಳು ಹಬ್ಬಿದ್ದು, ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಉಂಟಾಗಿದೆ’ ಎಂದು ಗ್ರಾಮದ ಮುಖಂಡ ಭರತ್ ತಿಳಿಸಿದ್ದಾರೆ.
‘ವಿದ್ಯುತ್ ಪೂರೈಸುವ ಹಲವು ಕಂಬಗಳಿಗೆಹೆಚ್ಚು ಬಳ್ಳಿಗಳು ಹಬ್ಬಿದ್ದು, ಜೊತೆಗೆ ಮರದ ಕೊಂಬೆಗಳು ಸಹ ತಾಕುತ್ತಿವೆ. ಕಂಬಗಳು ಸಂಪೂರ್ಣ ಬಳ್ಳಿಗಳಿಂದ ಮುಚ್ಚಿ ಹೋಗಿದ್ದರೂ ಬೆಸ್ಕಾಂ ಸಿಬ್ಬಂದಿ ಈ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ಅವರು ದೂರಿದ್ದಾರೆ.
‘ಮರಗಳು ವಿದ್ಯುತ್ ತಂತಿಗೆ ತಾಗುವ ಕಾರಣ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ತಂತಿಗಳು ಒಂದಕ್ಕೊಂದು ತಾಗುತ್ತಾ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಳ್ಳುತ್ತಿದೆ. ಈ ಕಂಬಗಳ ಬಳಿಯೇ ಮನೆಗಳಿದ್ದು, ಅನಾಹುತವಾಗುವ ಸಂಭವ ಹೆಚ್ಚಿದೆ. ಈ ಕುರಿತು ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಅವರು ಆರೋಪಿಸಿದ್ದಾರೆ.
‘ಆಗಾಗ ವಿದ್ಯುತ್ ಕಡಿತವಾಗುವ ಕಾರಣ ಕುಡಿಯುವ ನೀರಿಗೆ ತೊಂದರೆ ಉಂಟಾಗುತ್ತಿದೆ. ರಾತ್ರಿ ವೇಳೆ ವಿದ್ಯುತ್ ಕಡಿತವಾಗುತ್ತದೆ. ಪರಿಣಾಮ ಹಲವು ತೊಂದರೆಗಳು ಎದುರಾಗುತ್ತಿವೆ. ಇನ್ನಾದರೂ ಅಧಿಕಾರಿಗಳು ಸಮಸ್ಯೆ ಕಡೆ ಗಮನ ಹರಿಸಿ,ವಿದ್ಯುತ್ ಕಂಬಗಳಿಗೆ ತಾಗುತ್ತಿರುವ ಮರದ ಕೊಂಬೆಗಳು ಹಾಗೂ ಬಳ್ಳಿಗಳನ್ನು ತೆರವು ಮಾಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.