ಚನ್ನಪಟ್ಟಣ: ‘ಗ್ರಾಮೀಣ ಪ್ರದೇಶದಲ್ಲಿ ಹುದುಗಿರುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವ ಕಾರ್ಯವನ್ನು ಸಂಘ–ಸಂಸ್ಥೆಗಳು ಮಾಡಬೇಕಿದೆ’ ಎಂದು ರಾಮಮಂದಿರದ ಅರ್ಚಕ ರಾಮಚಂದ್ರ ಹೇಳಿದರು.
ತಾಲ್ಲೂಕಿನ ಕನ್ನಿದೊಡ್ಡಿ ಗ್ರಾಮದ ಶ್ರೀರಾಮ ಮಂದಿರದ ಆವರಣದಲ್ಲಿ ಪಂಚಮುಖಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ನಡೆದ ಜನಪದ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆವಹಿಸಿದ್ದ ಮುಖಂಡ ವಿಷಕಂಠಯ್ಯ ಮಾತನಾಡಿ, ‘ಗ್ರಾಮದಲ್ಲಿ ಜನಪದ ಸಂಗೀತೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಇಂತಹ ಕಾರ್ಯಕ್ರಮಗಳು ಗ್ರಾಮೀಣ ಭಾಗದಲ್ಲಿ ನಡೆಯುವುದರಿಂದ ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚು ಅವಕಾಶ ದೊರೆಯುತ್ತದೆ’ ಎಂದು
ಹೇಳಿದರು.
ಮುಖಂಡ ಸಿದ್ದಯ್ಯ ಮಾತನಾಡಿ, ಜನಪದ ಸಂಗೀತ ಕಾರ್ಯಕ್ರಮಗಳು ದೈಹಿಕ ಹಾಗೂ ಮಾನಸಿಕ, ಆರೋಗ್ಯಕ್ಕೆ ಒಳ್ಳೆಯದು. ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ಆಯೋಜನೆಯಾಗಬೇಕು ಎಂದು ತಿಳಿಸಿದರು.
ಮುಖಂಡರಾದ ನಂಜಯ್ಯ, ನಾಗರಾಜು, ದೇವರಾಜು, ಕುಮಾರ್, ಚಲುವಯ್ಯ, ಈಶ್ವರ, ಟ್ರಸ್ಟ್ ಅಧ್ಯಕ್ಷ ರಂಜಿನಿಕಾಂತ್, ಕಾರ್ಯದರ್ಶಿ ರಂಗಯ್ಯ ಭಾಗವಹಿಸಿದ್ದರು.
ಪಾರೇದೊಡ್ಡಿಯ ಶೇಷಾದ್ರಿ ತಂಡ, ಬೆಂಗಳೂರಿನ ಆರ್. ರಘು ಮತ್ತು ತಂಡ, ಮೋಳೆದೊಡ್ಡಿಯ ಸುಬ್ಬಣ್ಣ ಮತ್ತು ತಂಡ, ಕನ್ನಿದೊಡ್ಡಿಯ ಈಶ್ವರ ಮತ್ತು ತಂಡ, ರಾಂಪುರದ ಸಿದ್ದರಾಜು ಮತ್ತು ತಂಡ, ಚಕ್ಕೆರೆ ಲೋಕೇಶ್ ಮತ್ತು ತಂಡ, ಕನ್ನಿದೊಡ್ಡಿಯ ಶ್ರೀನಿವಾಸ್ ಮತ್ತು ತಂಡ, ಸುಣ್ಣಘಟ್ಟದ ಗಂಗಾಧರ್ ಮತ್ತು ತಂಡ ಜನಪದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.