ರಾಮನಗರ: ನಗರದ ಎಪಿಎಂಸಿ ಹಿಂಭಾಗದ ರುಕ್ಮಿಣಿ ಲೇಔಟ್ ಬಳಿ ಶನಿವಾರ ಮಾತನಾಡುತ್ತಾ ಕುಳಿತಿದ್ದ ಬೆಂಗಳೂರಿನ ಮುಸ್ಲಿಂ ದಂಪತಿ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿ, ನೈತಿಕ ಪೊಲೀಸ್ಗಿರಿ ನಡೆಸಿದೆ. ಮೂವರನ್ನು ಐಜೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಸಲ್ಮಾಬಾನು ಹಾಗೂ ನಿಯಾಮತ್ ಖಾನ್ ದಂಪತಿ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ನಡೆಸಿದ ಆರೋಪದ ಮೇಲೆ ರಾಮನಗರದ ಬಕಾಷ್ ಪಾಷಾ, ವಾಜಿದ್ ಪಾಷಾ, ಸಲ್ಮಾನ್ ಪಾಷಾ ಎಂಬುವರನ್ನು ಪೊಲೀಸರು ಸ್ಥಳದಲ್ಲಿಯೇ ಬಂಧಿಸಿದ್ದಾರೆ.
ತಲೆಮರೆಸಿಕೊಂಡಿರುವ ಆರು ಆರೋಪಿಗಳ ವಿರುದ್ಧ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಬೆಂಗಳೂರಿನ ನಿಯಾಮತ್ ಖಾನ್, ರಾಮನಗರದ ರುಕ್ಮಿಣಿ ಲೇಔಟ್ನಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯೊಂದರಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳ ಶಾಲಾ ಶುಲ್ಕ ಪಾವತಿಸಲು ಪತಿಯಿಂದ ಹಣ ತೆಗೆದುಕೊಂಡು ಹೋಗಲು ಪತ್ನಿ ಸಲ್ಮಾಬಾನು ಮಧ್ಯಾಹ್ನ 3.30ರ ಸುಮಾರಿಗೆ ರಾಮನಗರಕ್ಕೆ ಬಂದಿದ್ದರು.
ರುಕ್ಮಿಣಿ ಲೇಔಟ್ ಬಳಿ ಮಾತನಾಡುತ್ತ ಕುಳಿತಿದ್ದ ದಂಪತಿ ಮೇಲೆ ರಂಗರಾಯನಕೆರೆ ಕಡೆಯಿಂದ ಬಂದ ಗುಂಪು ಏಕಾಏಕಿ ಹಲ್ಲೆ ನಡೆಸಿದೆ. ‘ಮುಸ್ಲಿಂ ಮಹಿಳೆಯಾಗಿರುವ ನೀನು ಹಿಂದೂ ಹುಡುಗನ ಜೊತೆ ಮಾತನಾಡುತ್ತಾ ಕುಳಿತಿದ್ದೀಯಾ?’ ಎಂದು ಗುಂಪು ಪ್ರಶ್ನಿಸಿದೆ. ಈ ವೇಳೆ ಮಾತನಾಡಲು ಮುಂದಾದ ಪತಿಗೆ ಮಾತನಾಡಲು ಅವಕಾಶ ನೀಡದೆ ಕಟ್ಟಿಗೆ, ಕಬ್ಬಿಣದ ರಾಡು ಹಾಗೂ ಇಟ್ಟಿಗೆ ತುಂಡುಗಳಿಂದ ಹಲ್ಲೆ ನಡೆಸಿದರು ಎಂದು ಪೊಲೀಸರು ತಿಳಿಸಿದರು.
ಪತಿಯನ್ನು ಬಿಡಿಸಿಕೊಳ್ಳಲು ಮುಂದಾದ ಸಲ್ಮಾ ಮೇಲೂ ಹಲ್ಲೆ ಮಾಡಿ, ತಲೆಗೂದಲು ಹಿಡಿದು ಎಳೆದಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳುತ್ತಲೇ ಕೆಲವರು ಓಡಿ ಹೋಗಿದ್ದಾರೆ. ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.