ADVERTISEMENT

ಚನ್ನಪಟ್ಟಣ | ಶಾರ್ಟ್ ಸರ್ಕೀಟ್: ಕಬ್ಬುಬೆಳೆ ಭಸ್ಮ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 6:48 IST
Last Updated 2 ಮಾರ್ಚ್ 2024, 6:48 IST
ಚನ್ನಪಟ್ಟಣ ತಾಲ್ಲೂಕಿನ ಚಿಕ್ಕಬೋರೇಗೌಡನದೊಡ್ಡಿ ಗ್ರಾಮದ ಬಳಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟು ಭಸ್ಮವಾಗಿರುವ ಕಬ್ಬು ಬೆಳೆ
ಚನ್ನಪಟ್ಟಣ ತಾಲ್ಲೂಕಿನ ಚಿಕ್ಕಬೋರೇಗೌಡನದೊಡ್ಡಿ ಗ್ರಾಮದ ಬಳಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟು ಭಸ್ಮವಾಗಿರುವ ಕಬ್ಬು ಬೆಳೆ   

ಚನ್ನಪಟ್ಟಣ: ತಾಲ್ಲೂಕಿನ ಚಿಕ್ಕಬೋರೇಗೌಡನದೊಡ್ಡಿ ಗ್ರಾಮದ ಬಳಿ ಶುಕ್ರವಾರ ಸಂಜೆ ವಿದ್ಯುತ್ ಶಾರ್ಟ್ ಸರ್ಕೀಟ್‌ ಆಗಿ ಸುಮಾರು ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಳೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಚಿಕ್ಕಬೋರೇಗೌಡನದೊಡ್ಡಿ ಗ್ರಾಮದ ನಾಗೇಗೌಡರ ಮಗ ಶಿವಕಾಳ ಮತ್ತು ಇಗ್ಗಲೂರು ಗ್ರಾಮದ ಅಂದಾನಿ ಕಬ್ಬು ಕಳೆದುಕೊಂಡ ರೈತರು. ವಿದ್ಯುತ್ ತಂತಿಗಳು ಒಂದಕ್ಕೊಂದು ತಗುಲಿ ಬೆಂಕಿ ಹೊತ್ತುಕೊಂಡಿದೆ. ಈ ಇಬ್ಬರು ರೈತರು ತಮ್ಮ ಅಕ್ಕಪಕ್ಕದ ತಲಾ ಎರಡು ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು. ಸುಮಾರು ಆರು ತಿಂಗಳ ಕಬ್ಬು ಬೆಳೆ ಬೆಂಕಿಗೆ ಆಹುತಿಯಾಗಿದೆ. ಘಟನೆಯಲ್ಲಿ ಸುಮಾರು ₹8 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಬೆಂಕಿ ಹೊತ್ತ‌ಿಕೊಂಡು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹೊತ್ತಿ ಉರಿದಿದೆ. ರೈತರು ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆಮಾಡಿ ವಿಷಯ ತಿಳಿಸಿದ್ದಾರೆ. ಆನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು. ಅಷ್ಟರಲ್ಲಿ ಬಹುತೇಕ ಕಬ್ಬು ಬೆಳೆ ಬೆಂಕಿಗೆ ಆಹುತಿಯಾಗಿತ್ತು.

ADVERTISEMENT

ವಿದ್ಯುತ್ ಲೈನು ಜಮೀನಿನ ಮಧ್ಯೆ ಹಾದುಹೋಗಿದ್ದು, ಇವು ಗಾಳಿಗೆ ಒಂದಕ್ಕೊಂದು ತಗುಲಿ ಬೆಂಕಿ ಹೊತ್ತುಕೊಂಡಿದೆ. ಕಬ್ಬಿನ ಬೆಳೆ ನಾಶಕ್ಕೆ ಬೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣ ಎಂದು ರೈತರಾದ ಶಿವಕಾಳ ಹಾಗೂ ಅಂದಾನಿ ಆರೋಪಿಸಿದ್ದಾರೆ.

ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಬ್ಬು ಬೆಳೆದಿದ್ದರು. ಆರು ತಿಂಗಳು ರೈತರು ಶ್ರಮ ವಹಿಸಿ ಬೆಳೆ ಬೆಳೆದಿದ್ದರು. ಈಗ ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದ ಕಬ್ಬು ಸಂಪೂರ್ಣ ಭಸ್ಮವಾಗಿದ್ದು, ಇದಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.