ADVERTISEMENT

ರಾಮನಗರ| ಸಂಭ್ರಮದ ದತ್ತ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 13:31 IST
Last Updated 11 ಡಿಸೆಂಬರ್ 2019, 13:31 IST
ಬನ್ನಿಕುಪ್ಪೆ ಗ್ರಾಮದ ಶ್ರೀ ಕ್ಷೇತ್ರ ದತ್ತ ಪೀಠದಲ್ಲಿ ಬುಧವಾರ ದತ್ತ ಜಯಂತಿಯನ್ನು ಆಚರಿಸಲಾಯಿತು
ಬನ್ನಿಕುಪ್ಪೆ ಗ್ರಾಮದ ಶ್ರೀ ಕ್ಷೇತ್ರ ದತ್ತ ಪೀಠದಲ್ಲಿ ಬುಧವಾರ ದತ್ತ ಜಯಂತಿಯನ್ನು ಆಚರಿಸಲಾಯಿತು   

ರಾಮನಗರ: ದತ್ತ ಜಯಂತಿ ಅಂಗವಾಗಿ ತಾಲ್ಲೂಕಿನ ಕೈಲಾಂಚ ಹೋಬಳಿ ಬನ್ನಿಕುಪ್ಪೆ ಗ್ರಾಮದ ಶ್ರೀ ಕ್ಷೇತ್ರ ದತ್ತಪೀಠದಲ್ಲಿ ವಿಶೇಷ ಪೂಜೆ, ಹೋಮ, ಅಲಂಕಾರ, ಉತ್ಸವಮೂರ್ತಿಯ ಮರೆವಣಿಗೆ ಮತ್ತು ಮಹಾ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಭಕ್ತಿ, ಶ್ರದ್ಧೆಯಿಂದ ಬುಧವಾರ ನೆರೆವೇರಿತು.

ಶ್ರೀ ಕ್ಷೇತ್ರ ದತ್ತಪೀಠದಲ್ಲಿರುವ ಪುರಾತನ ದೇವಾಲಯವನ್ನು ಸಂಪೂರ್ಣ ವಿವಿಧ ಬಗೆಯ ಹೂಗಳಿಂದ ಅಲಂಕೃತಗೊಳಿಸಲಾಗಿತ್ತು. ಜಯಂತಿ ಅಂಗವಾಗಿ ನಾಲ್ಕು ದಿನಗಳಿಂದಲೇ ಧಾರ್ಮಿಕ ಕೈಂಕರ್ಯಗಳು ನಡೆದವು.

ಬುಧವಾರ ಬೆಳಿಗ್ಗೆ 5 ಗಂಟೆಗೆ ಅಭ್ಯಂಜನ ಸ್ನಾನ, 7 ಗಂಟೆಗೆ ಮಹಾನ್ಯಾಸ ಪೂರ್ವಕ ಶತರುದ್ರ ಅಭಿಷೇಕ, ಸಾರ್ವತ್ರಿಕ ಮಹಾ ಸಂಕಲ್ಪ, ಗಣಪತಿ ಹೋಮ, ದತ್ತಾತ್ರೇಯ ಹೋಮ, ರುದ್ರ ಹೋಮ, ದೇವಿ ಹೋಮ, ಸುಬ್ರಹ್ಮಣ್ಯ ಹೋಮ, ಆಂಜನೇಯ ಹೋಮ ಮತ್ತು ನವಗ್ರಹ ಹೋಮಗಳನ್ನು ಋತ್ವಿಕರು ಶಾಸ್ತ್ರೋಕ್ತವಾಗಿ ನಡೆಸಿಕೊಟ್ಟರು.

ADVERTISEMENT

ನಂತರ ಔದುಂಬರ ಪೂಜೆ, ಗೋಪೂಜೆ ನಡೆಯಿತು. ತದ ನಂತರ ನಡೆದ ದತ್ತ ಪಾದುಕಾ ವಿಶೇಷ ಪೂಜೆಯಲ್ಲಿ ಬೆಂಗಳೂರು ಮತ್ತಿತರ ಸ್ಥಳಗಳಿಂದಲೂ ಆಗಮಿಸಿದ್ದ ದಂಪತಿಗಳು ಭಾಗವಹಿಸಿದ್ದರು. ಕನ್ನಿಕಾ ಪೂಜೆ, ದಂಪತಿ ಪೂಜೆಗಳು ನಡೆದವು.

ನಂತರ ಬಗೆಬಗೆಯ ಹೂಗಳಿಂದ ಸಿಂಗರಿಸಿದ್ದ ಶ್ರೀ ದತ್ತಾತ್ರೆಯರ ಮೂರ್ತಿಯ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದಾಗ ಗ್ರಾಮಸ್ಥರು ಭಕ್ತಿ ಸಮರ್ಪಿಸಿಕೊಂಡರು.

ಈ ವೇಳೆ ನಾದಸ್ವರ, ಚಂಡೆ ವಾದನ, ವೇದಘೋಷ ಮೆರವಣಿಗೆಯ ವೈಭವವನ್ನು ಹೆಚ್ಚಿಸಿದವು. ಪೂರ್ಣಾಹುತಿ, ಊಂಛ ವೃತ್ತಿಯ ನಂತರ ಮಹಾ ಮಂಗಳಾರತಿ, ಮಹಾ ನೈವೇದ್ಯ ಮತ್ತು ಮಹಾ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನೆರೆವೇರಿದವು.

ದೇವಾಲಯದ ಆವರಣದಲ್ಲಿ ಒಂದೆಡೆ ಧಾರ್ಮಿಕ ಕೈಂಕರ್ಯಗಳು ನೆರೆವೇರಿದರೆ, ಮತ್ತೊಂದೆಡೆ ಅತ್ರಿ ಅನಸೂಯ ವೇದಿಕೆಯಲ್ಲಿ ಸಂಗೀತೋತ್ಸವ, ಶಾಸ್ತ್ರೀಯ ಗಾಯನ ಕಾರ್ಯಕ್ರಮಗಳು ನಡೆದವು.

ದೇವಾಲಯವನ್ನು ನಿರ್ವಹಿಸುತ್ತಿರುವ ಪ್ರಭಾಕರ್ ಮತ್ತು ಕುಟುಂಬ ಮತ್ತು ಅವರ ಬಳಗ ವ್ಯವಸ್ಥೆಯ ಭಾಗವಾಗಿದ್ದರು. ಪ್ರಧಾನ ಅರ್ಚಕ ದತ್ತಿ, ದತ್ತ ಉಪಾಸಕರಾದ ಅನಂತ ಸತ್ಯಂ, ರಾಧಾಕೃಷ್ಣ ಮತ್ತು ಬೆಂಗಳೂರಿನಿಂದ ಬಂದ ಋತ್ವಿಕರ ತಂಡದವರು ಧಾರ್ಮಿಕ ಕೈಂಕರ್ಯಗಳನ್ನು ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.