ADVERTISEMENT

ಸಾವು ಕಾಣುವುದೇ ದುಃಖದ ಸಂಗತಿ: ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 4 ಮೇ 2021, 5:02 IST
Last Updated 4 ಮೇ 2021, 5:02 IST
ರಾಘವೇಂದ್ರ
ರಾಘವೇಂದ್ರ   

ರಾಮನಗರ: ‘ಕೋವಿಡ್ ಐಸಿಯುನಲ್ಲಿ ಅನೇಕರ ಪ್ರಾಣಗಳನ್ನು ಉಳಿಸಿದಾಗ ಖುಷಿ ಆಗಿತ್ತು. ಆದರೆ, ಇಂದು ಸಣ್ಣ ವಯಸ್ಸಿನವರು ಈ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪುವುದನ್ನು ಕಂಡು ದುಃಖವಾಗುತ್ತಿದೆ. ಜನರು ಇನ್ನಾದರೂ ಎಚ್ಚೆತ್ತುಕೊಳ್ಳುವುದು ಒಳಿತು’

ಇದು ಚನ್ನಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸಿಂಗ್‌ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರಾಘವೇಂದ್ರರ ಕಳಕಳಿಯ ಮನವಿ. ಕೋವಿಡ್ ಆರಂಭದ ದಿನಗಳಿಂದಲೂ ಸೋಂಕಿತರ ಪಾಲನೆ–ಪೋಷಣೆಯಲ್ಲಿ ತೊಡಗಿಸಿಕೊಂಡಿರುವ ಅವರು ರೋಗಿಗಳ ಆರೋಗ್ಯ ತಪಾಸಣೆ, ಆರೈಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಬೆಂಗಳೂರಿಗರಾದ ರಾಘವೇಂದ್ರ ಶುಶ್ರೂಷಕ ವೃತ್ತಿಯನ್ನು ಇಷ್ಟಪಟ್ಟು ಸೇರಿ ದಶಕ ಕಳೆದಿದೆ. ಅದರಲ್ಲೂ ಕಳೆದೊಂದು ವರ್ಷದಿಂದ ಕೋವಿಡ್ ಸೈನಿಕರಾಗಿ ದುಡಿಯುತ್ತಿರುವುದಕ್ಕೆ ಅವರಲ್ಲಿ ಸಂತೃಪ್ತಿ ಇದೆ. ಕೆಲವು ತಿಂಗಳು ರಾಮನಗರದ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ರೋಗಿಗಳ ಆರೈಕೆ ಮಾಡಿರುವ ಅವರು, ಸದ್ಯ ಫೀವರ್‌ ಕ್ಲಿನಿಕ್‌ಗಳಲ್ಲಿ ರೋಗಿಗಳ ತಪಾಸಣೆ, ಸಾರ್ವಜನಿಕರಿಗೆ ಲಸಿಕೆ ನೀಡಿಕೆಯಂತಹ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.

ADVERTISEMENT

ವರ್ಷಗಳ ಹಿಂದೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಇದ್ದ ಸಂದರ್ಭ ಅಲ್ಲಿಗೆ ತೆರಳಿ ಸೇವೆ ಸಲ್ಲಿಸಿದ್ದಾರೆ. ಜಿಲ್ಲಾಡಳಿತದ ವಿಪತ್ತು ನಿರ್ವಹಣಾ ತಂಡ ಸೇರಿ ತರಬೇತಿಯನ್ನೂ ಪಡೆದಿದ್ದಾರೆ. ‘ಈಚೆಗೆ ಸೋಂಕು ಎಲ್ಲೆಡೆ ಹಬ್ಬುತ್ತಿದ್ದು, ಜನರು ಈ ಬಗ್ಗೆ ಎಚ್ಚರ ವಹಿಸಬೇಕು. ಕೋವಿಡ್ ನಿಯಮಗಳನ್ನು ಪ್ರತಿಯೊಬ್ಬರು ತಪ್ಪದೇ ಪಾಲಿಸಬೇಕು. ಆಗ ಸೋಂಕು ನಿಯಂತ್ರಣಕ್ಕೆ ಬರುತ್ತದೆ. ಕೋವಿಡ್ ವಾರಿಯರ್‌ಗಳ ಸೇವೆಯೂ ಸಾರ್ಥಕವಾಗುತ್ತದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.