ರಾಮನಗರ: ಇಂದಿನ ಆಹಾರ ಕ್ರಮದಲ್ಲಿ ಬಹಳ ವ್ಯತ್ಯಾಸ ಇರುವುದರಿಂದ ಪ್ರತಿಯೊಬ್ಬರು ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸ್ತ್ರೀರೋಗ ತಜ್ಞೆ ಡಾ.ಪವಿತ್ರಾ ಹೇಳಿದರು.
ತಾಲ್ಲೂಕಿನ ಕೂನಮುದ್ದನಹಳ್ಳಿಯಲ್ಲಿ ಚಂದ್ರಮ್ಮ ದಯಾನಂದ ಸಾಗರ ಆಸ್ಪತ್ರೆಯಿಂದ ಶನಿವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ನಾವು ಸೇವಿಸುವ ಆಹಾರದಿಂದಲೇ ಹಲವು ರೋಗಗಳು ಕಾಡುತ್ತಿವೆ. ಆದ್ದರಿಂದ ಆಹಾರದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಕಲಬೆರಕೆ ಆಹಾರದ ಬಗ್ಗೆ ಎಚ್ಚರಿಕೆವಹಿಸುವುದು ಅಗತ್ಯವಾಗಿದೆ. ಪ್ರತಿಯೊಬ್ಬರು ವ್ಯಾಯಾಮವನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸ್ತ್ರೀರೋಗ ತಜ್ಞೆ ಡಾ.ಸ್ನೇಹಾ ಮಾತನಾಡಿ, ಗ್ರಾಮೀಣ ಮಹಿಳೆಯರು ಆರೋಗ್ಯದ ಬಗ್ಗೆ ಯಾವುದೇ ಮುಜುಗರ ಪಟ್ಟುಕೊಳ್ಳದೆ ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಪೌಷ್ಟಿಕ ಆಹಾರ ಸೇವನೆ ಮಾಡಬೇಕು ಎಂದರು.
ದಯಾನಂದ ಸಾಗರ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ.ಅಪೂರ್ವ, ತಜ್ಞ ವೈದ್ಯರಾದ ಡಾ.ತೇಜಸ್, ಡಾ.ಜೀವನ್, ನೇತ್ರ ತಜ್ಞರಾದ ಡಾ.ಹೇಮಂತ್, ಮಕ್ಕಳ ತಜ್ಞ ಡಾ.ಅಜಯ್, ಮೂಳೆ ರೋಗ ತಜ್ಞರಾದ ಡಾ.ವಾದಿರಾಜ್, ಆಸ್ಪತ್ರೆ ಆಡಳಿತ ವರ್ಗದ ಸುಬ್ರಹ್ಮಣ್ಯ ಸುಂದರ್ ಗೌಡ ಹಾಗೂ ರಾಧಾಕೃಷ್ಣ ಮತ್ತು ಮುಖಂಡರಾದ ನಂಜಪ್ಪ, ನಾಗೇಶ್, ವೇದರಾಜು ಇದ್ದರು.
ಕೂನಮುದ್ದನಹಳ್ಳಿ, ಅರೇಹಳ್ಳಿ, ಪಾದರಹಳ್ಳಿ, ತಿಮ್ಮಸಂದ್ರ ಸೇರಿದಂತೆ ಸುತ್ತಮುತ್ತಲ 300ಕ್ಕೂ ಹೆಚ್ಚು ಗ್ರಾಮಸ್ಥರು ಆರೋಗ್ಯ ತಪಾಸಣೆಗೆ ಒಳಗಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.