ರಾಮನಗರ: ಅಂಗವಿಕಲ ಕಲ್ಯಾಣ ಇಲಾಖೆಯ ಸೌಲಭ್ಯಕ್ಕೆ ಆಯ್ಕೆಯಾಗಿರುವ ಎಂಟು ಫಲಾನುಭವಿಗಳಿಗೆ ಶಾಸಕ ಇಕ್ಬಾಲ್ ಹುಸೇನ್ ಸೋಮವಾರ ಶಾಸಕರ ಕಚೇರಿ ಆವರಣದಲ್ಲಿ ತ್ರಿಚಕ್ರ ವಾಹನಗಳನ್ನು ವಿತರಿಸಿದರು.
ಬಳಿಕ ಮಾತನಾಡಿದ ಅವರು, ‘ಬಡವರು, ಶೋಷಿತರು ಹಾಗೂ ಅಂಗವಿಕಲರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಎಲ್ಲರೂ ಈ ಯೋಜನೆಗಳ ಪ್ರಯೋಜನ ಪಡೆದು ಸ್ವಾವಲಂಬಿಗಳಾಗಬೇಕು’ ಎಂದರು.
‘ಅಂಗವಿಕಲ ಇಲಾಖೆಯ ಯೋಜನೆಗಳು ಅನ್ಯರ ಪಾಲಾಗುತ್ತಿರುವ ಆರೋಪಗಳಿವೆ. ಅದಕ್ಕೆ ಯಾವುದೇ ರೀತಿಯಲ್ಲೂ ಅವಕಾಶ ನೀಡದೆ, ಅರ್ಹರಿಗೆ ಮಾತ್ರ ಸೌಲಭ್ಯಗಳು ತಲುಪುವಂತೆ ಎಚ್ಚರಿಕೆ ವಹಿಸಬೇಕು’ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವ್ವೇರಹಳ್ಳಿ ಮನು, ಬಿಳಗುಂಬ ರಮೇಶ್, ಕವಣಾಪುರ ವೆಂಕಟೇಶ್, ಕೇತೋಹಳ್ಳಿ ರಾಜಮುಡಿ, ರಾಮನಗರ ಅಲ್ಲಾಬಕಾಸ್, ರವಿ, ಜವಳಗೆರೆದೊಡ್ಡಿ ಸಂತೋಷ್ ಹಾಗೂ ಹನುಮಂತೇಗೌಡನ ದೊಡ್ಡಿ ಮಾಧುನಾಯ್ಕ ಅವರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು.
ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ನಾಗವೇಣಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಚ್. ರಾಜು, ನಗರ ಕಾಂಗ್ರೇಸ್ ಘಟಕ ಅಧ್ಯಕ್ಷ ಎ.ಬಿ. ಚೇತನ್ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಕೆ. ರಮೇಶ್, ಮುಖಂಡರಾದ ಸಿಎನ್ಆರ್ ವೆಂಕಟೇಶ್, ಕೆ. ರಮೇಶ್, ಬಿ.ಕೆ. ಪವಿತ್ರ, ವಿಜಯಕುಮಾರಿ, ಜಯಲಕ್ಷ್ಮಮ್ಮ, ಅನಿಲ್ ಜೋಗಿಂದರ್, ರಾಮಣ್ಣ, ಐಹಿಸಾಬಾನು ಬೈರೇಗೌಡ, ರಂಜಿತ್, ಸುನಿಲ್ ಹಾಗೂ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.