ಚನ್ನಪಟ್ಟಣ: ‘ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಸಮಸ್ಯೆ ಅರಿತು ಅವುಗಳ ಪರಿಹಾರಕ್ಕೆ ಪ್ರಯತ್ನಿಸಬೇಕು’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವಿ. ವೆಂಕಟೇಶ್ ಕಿವಿಮಾತು ಹೇಳಿದರು.
ತಾಲ್ಲೂಕಿನ ಕೂರಣಗೆರೆ ಗ್ರಾಮದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ 1 ಹಾಗೂ 2 ರ ವತಿಯಿಂದ ‘ಆರೋಗ್ಯವಂತ ಸಮಾಜದತ್ತ ಯುವಜನತೆ’ ಎಂಬ ಘೋಷವಾಕ್ಯದಡಿಯಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನೆ ಮಾಡಿ ಮಾತನಾಡಿದರು.
‘ಪರಿಸರ ಸ್ವಚ್ಛತೆಯ ಅರಿವು ಗ್ರಾಮೀಣ ಜನರಲ್ಲಿ ಕಡಿಮೆ ಇರುತ್ತದೆ. ಇದನ್ನು ವಿದ್ಯಾರ್ಥಿಗಳು ಅರಿತು ಅವರಲ್ಲಿ ಜಾಗೃತಿ ಮೂಡಿಸಬೇಕು. ಇಂತಹ ಉಪಯುಕ್ತ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದೇ ರಾಷ್ಟೀಯ ಸೇವಾ ಯೋಜನೆಯ ಮೂಲ ಉದ್ದೇಶ. ಇದರ ಅನುಸಾರ ವಿದ್ಯಾರ್ಥಿಗಳು ಸೇವೆ ಮಾಡಬೇಕು’ ಎಂದರು.
‘ಕಲಿಕೆ ಕೇವಲ ಪಠ್ಯದಿಂದ ಮಾತ್ರ ಸಾಧ್ಯವಿಲ್ಲ. ವಿಶೇಷ ವಾರ್ಷಿಕ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಜೀವನ ಕಲೆಯನ್ನು, ಬದುಕಿನ ಪಥವನ್ನು ತಿಳಿಸಿಕೊಡುತ್ತದೆ. ಇಂತಹ ಅನುಭವವೇ ಮುನ್ನಡೆಸುವ ದಾರಿದೀಪ. ನೈರ್ಮಲ್ಯ, ಸ್ವಚ್ಛತೆ ಬಗ್ಗೆ ಗ್ರಾಮೀಣರಿಗೆ ಅರಿವು ಮೂಡಿಸಿದಾಗ ಮಾತ್ರ ಶಿಬಿರ ಸಾರ್ಥಕತೆಯನ್ನು ಕಾಣುತ್ತದೆ’ ಎಂದರು.
ಗ್ರಾಮದ ಮುಖಂಡರಾದ ಕೂರಣಗೆರೆ ರವಿ, ಶಿವಣ್ಣ, ಶಿಬಿರಾಧಿಕಾರಿಗಳಾದ ಶ್ರೀಕಾಂತ್, ನಂಜಂಡ, ಡಾ.ಶ್ರೀನಿವಾಸ್, ಡಾ.ಮುರಳಿ, ಕುಸುಮ, ರುಕ್ಮಿಣಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಸಮವಸ್ತ್ರ, ಬ್ಯಾಡ್ಜ್ ಗಳನ್ನು ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.