ಕನಕಪುರ: ತಾಲ್ಲೂಕಿನ ಮರಳವಾಡಿ ಗ್ರಾಮದಿಂದ ಹಾರೋಹಳ್ಳಿಗೆ ಹೋಗುವ ರಸ್ತೆಯ ಎರಡೂ ಬದಿಯಲ್ಲಿ ಇರುವ ಆಲದ ಮರಗಳ ಕೊಂಬೆಗಳು ರಸ್ತೆಯುದ್ದಕ್ಕೂ ಬೆಳೆದುಕೊಂಡಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹಾಗಾಗಿ, ಕೊಂಬೆಗಳನ್ನು ತೆರವುಗೊಳಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ರಸ್ತೆಯಲ್ಲಿ ಓಡಾಡುವ ಜನರು ಮತ್ತು ವಾಹನ ಸವಾರರಿಗೆ ನೆರಳಿನ ಆಸರೆಯಾಗಲಿ ಎಂದು ರಸ್ತೆಯ ಇಕ್ಕೆಲಗಳಲ್ಲಿ ನೆಟ್ಟಿದ್ದ ಆಲದ ಕೊಂಬೆಗಳು ದೊಡ್ಡದಾಗಿ ಬೆಳೆದಿವೆ. ಮರದ ಬೀಳಲು ಕೆಳಕ್ಕೆ ಬಿದ್ದು ಬೆಳೆದುಕೊಂಡಿರುವುದರಿಂದ ಮರಗಳು ರಸ್ತೆಯನ್ನೇ ಆವರಿಸಿಕೊಂಡಿವೆ.
ಎರಡು ಕಡೆಯ ಆಲದ ಮರಗಳು ಬೆಳೆದು ಮೇಲ್ಭಾಗದಲ್ಲಿ ಒಟ್ಟಿಗೆ ಸೇರಿಕೊಂಡಿರುವುದರಿಂದ ಲಾರಿ, ಬಸ್ ಸಂಚರಿಸುವಾಗ ವಾಹನಗಳಿಗೆ ಕೊಂಬೆಗಳು ತಾಗುತ್ತವೆ. ಅದನ್ನು ತಪ್ಪಿಸಲು ಹೋಗಿ ವಾಹನಗಳು ಅಪಘಾತಕ್ಕೀಡಾಗುತ್ತಿವೆ.
ಕೊಂಬೆಗಳು ಬೃಹದಾಕಾರವಾಗಿ ಬೆಳೆದು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿವೆ. ಅಪಘಾತಕ್ಕೆ ಕಾರಣವಾಗಿರುವ ಕೊಂಬೆಗಳನ್ನು ಕತ್ತರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ಸಾರ್ವಜನಿಕರ
ಆಗ್ರಹ.
‘ಸಾರ್ವಜನಿಕರ ಅನುಕೂಲಕ್ಕಾಗಿ ನೆಟ್ಟಿರುವ ಆಲದ ಮರಗಳಿಂದಲೇ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಅದಕ್ಕಾಗಿ ಅರಣ್ಯ ಇಲಾಖೆಯವರು ರಸ್ತೆಯ ಭಾಗಕ್ಕೆ ಬೆಳೆದುಕೊಂಡಿರುವ ಮರದ ಕೊಂಬೆಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮರಳವಾಡಿ ಎಂ.ಎನ್. ನಾಗರಾಜು ಒತ್ತಾಯಿಸಿದರು.
‘ರಸ್ತೆಯಲ್ಲಿ ಕೆಲವು ಮರಗಳು ಒಣಗಿ ವಾಹನ ಸವಾರರ ಮೇಲೆ ಬೀಳುವ ಸ್ಥಿತಿಯಲ್ಲಿವೆ. ರಸ್ತೆಗೆ ವಾಲಿಕೊಂಡಿದ್ದರೂ ಸಂಬಂಧಪಟ್ಟವರು ಅವುಗಳನ್ನು ತೆಗೆಯಲು ಮುಂದಾಗುವುದಿಲ್ಲ. ಅನಾಹುತ ಆಗುವುದಕ್ಕಿಂತ ಮುಂಚೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.